ಶಿರಸಿ: ದೇಶದ ಗಡಿಯಲ್ಲಿ ನಿಂತು ರಾಷ್ಟ್ರದ ರಕ್ಷಣೆ ಮಾಡುತ್ತಿರುವ ಸೈನಿಕರ ಸುರಕ್ಷತೆ, ಆರೋಗ್ಯ ಹಾಗೂ ವಿಜಯಕ್ಕಾಗಿ ದೇವರ ಸನ್ನಿಧಿಯಲ್ಲಿ ನಡೆಯುವ ಪ್ರಾರ್ಥನೆಗೆ ವಿಶೇಷ ಮಹತ್ವವಿದೆ. ಇದೇ ಸಂಕಲ್ಪದೊಂದಿಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಶುಕ್ರವಾರ ದೇಶದ ಯೋಧರ ರಕ್ಷಣೆಗಾಗಿ ವಿಶಿಷ್ಟ ಧಾರ್ಮಿಕ ಕಾರ್ಯಕ್ರಮ ನೆರವೇರಿತು. ಶ್ರೀಕೃಷ್ಣನಿಗೆ 8 ಲಕ್ಷ ತುಳಸಿ ದಳಗಳನ್ನು ಸಮರ್ಪಿಸುವ ಮೂಲಕ ಸೈನಿಕರ ಕ್ಷೇಮ ಮತ್ತು ರಾಷ್ಟ್ರದ ಹಿತಕ್ಕಾಗಿ ಪ್ರಾರ್ಥಿಸಲಾಯಿತು.
ಶ್ರೀಮಜ್ಜದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಸಂಕಲ್ಪದಂತೆ ಶ್ರೀಮಠದಲ್ಲಿ 27ನೇ ವರ್ಷದ ತುಳಸಿ ಅರ್ಚನೆ ನಡೆಯಿತು. ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹಾಗೂ ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದೇಶದ ಗಡಿ ಕಾಯುತ್ತಿರುವ ವೀರ ಸೈನಿಕರ ರಕ್ಷಣೆ, ಆರೋಗ್ಯ, ವಿಜಯ ಹಾಗೂ ಕ್ಷೇಮಕ್ಕಾಗಿ ಶ್ರೀಕೃಷ್ಣ ಪರಮಾತ್ಮನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಕಾರ್ಗಿಲ್ ಯುದ್ಧದ ಸಂಕಷ್ಟದ ಸಂದರ್ಭದಲ್ಲಿ ಆರಂಭಗೊಂಡ ಈ ಧಾರ್ಮಿಕ ಸಂಕಲ್ಪವು ನಿರಂತರವಾಗಿ ನಡೆದುಕೊಂಡು ಬಂದಿದ್ದು, ಯೋಧರಿಗೆ ಆಧ್ಯಾತ್ಮಿಕ ಹಾಗೂ ಮಾನಸಿಕ ಬಲ ದೊರೆಯಲಿ, ಅವರ ಆರೋಗ್ಯ ಉತ್ತಮವಾಗಿರಲಿ ಮತ್ತು ದೇಶದ ರಕ್ಷಣಾ ಕಾರ್ಯದಲ್ಲಿ ಅವರು ಯಶಸ್ವಿಯಾಗಲಿ ಎಂಬ ಆಶಯವನ್ನು ಹೊಂದಿದೆ. ಇದೇ ಸಂಕಲ್ಪದ ಮುಂದುವರಿದ ಭಾಗವಾಗಿ ಈ ಬಾರಿಯೂ ತುಳಸಿ ಅರ್ಚನೆ ನೆರವೇರಿಸಲಾಯಿತು.
ಶುಕ್ರವಾರ ಬೆಳಗ್ಗೆಯಿಂದಲೇ ಶ್ರೀಮಠದಲ್ಲಿ ವಿಶೇಷ ಪೂಜೆ, ಲಕ್ಷ ತುಳಸಿ ಅರ್ಚನೆ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಶ್ರದ್ಧಾ-ಭಕ್ತಿಯಿಂದ ಜರುಗಿದವು. ಶ್ರೀಕೃಷ್ಣನಿಗೆ 8 ಲಕ್ಷ ಸಂಖ್ಯೆಯ ತುಳಸಿ ದಳಗಳನ್ನು ಅರ್ಪಿಸಿ ದೇಶದ ಹಿತ ಹಾಗೂ ಸೈನಿಕರ ರಕ್ಷಣೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ರಾಷ್ಟ್ರದ ಹಿತರಕ್ಷಣೆ ಮತ್ತು ಗಡಿ ಕಾಯುತ್ತಿರುವ ಸೈನಿಕರ ವಿಜಯ ಹಾಗೂ ಕ್ಷೇಮವನ್ನು ಆಶಯವಾಗಿಟ್ಟುಕೊಂಡು ನಡೆದ ಈ ಕಾರ್ಯಕ್ರಮದಲ್ಲಿ 200ಕ್ಕೂ ಅಧಿಕ ಋತ್ವಿಜರು ಭಾಗವಹಿಸಿ ತುಳಸಿ ಅರ್ಚನೆಯನ್ನು ನಿಷ್ಠೆ ಮತ್ತು ಭಕ್ತಿಯಿಂದ ನೆರವೇರಿಸಿದರು.
ಶ್ರೀ ಸ್ವರ್ಣವಲ್ಲೀ, ನಡಗೋಡ, ಬನವಾಸಿ, ಉಮ್ಮಚಗಿ ಹಾಗೂ ಶಾರದಾಂಬಾ ಪಾಠಶಾಲೆಗಳ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸಹ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ವಿವಿಧ ಸೇವಾ ಕಾರ್ಯಗಳನ್ನು ನಿರ್ವಹಿಸಿದರು.
ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ನಡೆದ ವಿಶೇಷ ಪೂಜೆ ಮತ್ತು ತುಳಸಿ ಅರ್ಚನೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆದರು.