ಮೂವರು ಯುವಕರು ಪೊಲೀಸರ ಬಲೆಗೆ
ಅಂಕೋಲಾ: ರಾಷ್ಟ್ರೀಯ ಹೆದ್ದಾರಿಯ ಬಾಳೆಗುಳಿ ಫ್ಲೈಓವರ್ ಕೆಳಗೆ ಸಾರ್ವಜನಿಕರಿಗೆ ಹಾಗೂ ಲಾರಿ ಚಾಲಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಮೂವರು ಯುವಕರನ್ನು ಅಂಕೋಲಾ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಅಂಕೋಲಾ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ವಿಶ್ವನಾಥ ನಿಂಗೊಳ್ಳಿ ಅವರು ಗಸ್ತು ಕರ್ತವ್ಯದಲ್ಲಿದ್ದ ವೇಳೆ, ಜೈಹಿಂದ್ ಸರ್ಕಲ್ ಸಮೀಪ ಇದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಬಾಳೆಗುಳಿ ಫ್ಲೈಓವರ್ ಕೆಳಗೆ ವ್ಯಕ್ತಿಯೊಬ್ಬ ಗಾಂಜಾವನ್ನು ಮಾರಾಟ ಮಾಡುತ್ತಿದ್ದಾನೆ ಎಂಬ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದರು.
ಕಾರ್ಯಾಚರಣೆಯಲ್ಲಿ ಮೊಹಮ್ಮದ್ ಅಬಿದ್ (19), ಬದ್ದುದ್ದೀನ್ ಅಮನ್ (20) ಹಾಗೂ ಅಬ್ದುಲ್ ಅಜೀಜ್ (18) ಎಂಬ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಮೂವರೂ ಭಟ್ಕಳ ತಾಲೂಕಿನ ಗುಳ್ಮಮ ಗ್ರಾಮದ ನಿವಾಸಿಗಳಾಗಿದ್ದು, ಹೋಟೆಲ್ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಕಪ್ಪು, ನೀಲಿ ಹಾಗೂ ಕೆಂಪು ಬಣ್ಣದ ಬ್ಯಾಗ್ಗಳೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ನಡೆಸುತ್ತಿದ್ದರು. ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.