ಯಲ್ಲಾಪುರ: ತಾಲೂಕಿನ ಗೇರಾಳ ಗ್ರಾಮ ಅರಣ್ಯ ಸಮಿತಿಯ ವತಿಯಿಂದ ಭಾನುವಾರ ದೇವರಗದ್ದೆ ಅರಣ್ಯ ಪ್ರದೇಶದಲ್ಲಿ ವೃಕ್ಷಾರೋಪಣ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸದಸ್ಯರು ಹಾಗೂ ಗ್ರಾಮಸ್ಥರು ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಸಂಕಲ್ಪ ಕೈಗೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಅರಣ್ಯ ಸಮಿತಿ (ವಿಎಫ್ಸಿ) ಅಧ್ಯಕ್ಷ ಜಿ.ಎಸ್. ಭಟ್ಟ ಕಾರೇಮನೆ ಮಾತನಾಡಿ, ಪರಿಸರಕ್ಕೆ ಹಾನಿಯುಂಟುಮಾಡುವ ಯೋಜನೆಗಳ ಬದಲು ಜನಪರ ಹಾಗೂ ಪರಿಸರ ಸ್ನೇಹಿ ಅಭಿವೃದ್ಧಿ ಯೋಜನೆಗಳು ಜಾರಿಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಯನ್ನು ಖಂಡಿಸಿದ ಅವರು, ಯಾವುದೇ ಕಾನೂನುಗಳಿದ್ದರೂ ಸಾರ್ವಜನಿಕ ಹಿತಾಸಕ್ತಿ ಕಾಯ್ದೆಯಡಿ ಪರಿಸರ ಮತ್ತು ಜನರ ಹಕ್ಕುಗಳ ರಕ್ಷಣೆಗಾಗಿ ಹೋರಾಡುವ ಹಕ್ಕು ಸಮಾಜಕ್ಕಿದೆ ಎಂದು ಹೇಳಿದರು.
ರೈತರು ತಮ್ಮ ಪರಂಪರಾಗತ ಕೃಷಿ ಹಾಗೂ ಜೀವನೋಪಾಯದ ಚಟುವಟಿಕೆಗಳ ಸಂದರ್ಭದಲ್ಲಿ ಮರಗಳನ್ನು ತೆರವುಗೊಳಿಸಬೇಕಾದ ಅನಿವಾರ್ಯತೆ ಎದುರಾದರೆ, ಒಂದು ಮರಕ್ಕೆ ಬದಲಾಗಿ ಕನಿಷ್ಠ ಎರಡು ಅಥವಾ ಅದಕ್ಕಿಂತ ಹೆಚ್ಚು ಗಿಡಗಳನ್ನು ನೆಟ್ಟು ಅರಣ್ಯ ಸಂಪತ್ತನ್ನು ವೃದ್ಧಿಸಬೇಕು. ಈ ಭಾಗದಲ್ಲಿ ಹಿಂದಿನಿಂದಲೂ ಇದ್ದ ನಿತ್ಯಹರಿದ್ವರ್ಣ ಕಾಡು ಮುಂದಿನ ಪೀಳಿಗೆಗೂ ಉಳಿಯುವಂತೆ ಎಲ್ಲರೂ ಕಾಳಜಿ ವಹಿಸಬೇಕೆಂದು ಕರೆ ನೀಡಿದರು.
ಅತಿಥಿಯಾಗಿ ಭಾಗವಹಿಸಿದ್ದ ಕೆ.ಎಸ್. ಭಟ್ಟ ಅವರು ಗೇರಾಳ ಗ್ರಾಮ ಅರಣ್ಯ ಸಮಿತಿಯ ಕಾರ್ಯಚಟುವಟಿಕೆಗಳನ್ನು ಹಾಗೂ ಪರಿಸರ ಸಂರಕ್ಷಣೆಯಲ್ಲಿ ಸಮಿತಿಯ ಕೊಡುಗೆಯನ್ನು ಶ್ಲಾಘಿಸಿದರು.
ಅರಣ್ಯ ರಕ್ಷಕ ಶಿವಾನಂದ ಮಾತನಾಡಿ, ಸಾರ್ವಜನಿಕರು ಮತ್ತು ಅರಣ್ಯ ಇಲಾಖೆ ಪರಸ್ಪರ ಸಹಕಾರದಿಂದ ಅರಣ್ಯ ಸಂಪತ್ತನ್ನು ಬೆಳೆಸುವ ಕೆಲಸಕ್ಕೆ ಮುಂದಾಗಬೇಕು ಎಂದು ಹೇಳಿದರು.
ರವಿ ಬರಗದ್ದೆ ಸ್ವಾಗತಿಸಿದರು. ಶಂಕರ ಧೂಳಿ ವಂದಿಸಿದರು. ಕಾರ್ಯಕ್ರಮದಲ್ಲಿ ವಿ.ಎಸ್. ಭಟ್ಟ ಕಾರೆಮನೆ, ಕೆ.ಎಸ್. ಭಟ್ಟ ಆನಗೋಡ ಸೇರಿದಂತೆ ಗ್ರಾಮಸ್ಥರು, ಅರಣ್ಯ ಸಮಿತಿ ಸದಸ್ಯರು ಹಾಗೂ ಪರಿಸರಾಸಕ್ತರು ಉಪಸ್ಥಿತರಿದ್ದರು.