ಕುಮಟಾ: ಭಕ್ತಿ ಮತ್ತು ದಾನಶೀಲತೆಯ ಅಪರೂಪದ ಉದಾಹರಣೆಯಾಗಿ ಉದ್ಯಮಿ ವಾಸುದೇವ ಬೈಂದೂರು ಅವರು ಸುಮಾರು 2 ಕೋಟಿ ರೂ. ಮೌಲ್ಯದ ಭೂಮಿಯನ್ನು ಕುಮಟಾದ ಬಾಡದ ಶ್ರೀ ಕಾಂಚಿಕಾ ಪರಮೇಶ್ವರಿ ದೇವಸ್ಥಾನಕ್ಕೆ ದಾನವಾಗಿ ನೀಡಿದ್ದಾರೆ.
ಬೈಂದೂರಿನ ಯಡ್ತಾರೆ ನಿವಾಸಿಯಾಗಿರುವ ವಾಸುದೇವ ಬೈಂದೂರು ಅವರು ಹೊಲನಗದ್ದೆ ಸಮೀಪ 24.8 ಗುಂಟೆ ಜಾಗದ ಮಾಲೀಕರಾಗಿದ್ದರು. ಈ ಭೂಮಿಯನ್ನು ದೇವಿ ಸನ್ನಿಧಿಗೆ ಅರ್ಪಿಸುವ ಇಚ್ಛೆಯನ್ನು ಅವರು ಈ ಹಿಂದೆ ದೇವಸ್ಥಾನದ ಅಧ್ಯಕ್ಷ ಎಸ್.ಎಸ್. ಹೆಗಡೆ ಅವರ ಬಳಿ ವ್ಯಕ್ತಪಡಿಸಿದ್ದರು. ಸುಮಾರು 2 ಕೋಟಿ ರೂ. ಮೌಲ್ಯದ ಈ ಭೂಮಿಯನ್ನು ಸಂಪೂರ್ಣವಾಗಿ ದಾನವಾಗಿ ನೀಡುವುದಾಗಿ ಘೋಷಿಸಿದ್ದರು.
ಅದರಂತೆ ಮಂಗಳವಾರ ಉಪನೋಂದಣಾಧಿಕಾರಿ ಕಚೇರಿ ಮೂಲಕ ಅಗತ್ಯ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ತಮ್ಮ ಹೆಸರಿನಲ್ಲಿದ್ದ ಭೂಮಿಯನ್ನು ದೇವಸ್ಥಾನಕ್ಕೆ ಹಸ್ತಾಂತರಿಸಿದರು. ದೇವಸ್ಥಾನದ ಪಶ್ಚಿಮ ದಿಕ್ಕಿನಲ್ಲಿರುವ ಈ ಜಾಗವನ್ನು ದೇವಸ್ಥಾನದ ಆಡಳಿತ ಮಂಡಳಿ ಅಧಿಕೃತವಾಗಿ ಸ್ವೀಕರಿಸಿತು.
ಈ ಸಂದರ್ಭದಲ್ಲಿ ವಾಸುದೇವ ಬೈಂದೂರು ಅವರು ನೋಂದಾಯಿತ ದಾನಪತ್ರವನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಹಸ್ತಾಂತರಿಸಿದರು. ದಾನಪತ್ರ ಸ್ವೀಕರಿಸಿದ ಆಡಳಿತ ಮಂಡಳಿಯವರು ಅವರ ಉದಾರ ಮನೋಭಾವವನ್ನು ಶ್ಲಾಘಿಸಿ, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸಮಸ್ತ ಭಕ್ತರ ಪರವಾಗಿ ಕೃತಜ್ಞತೆ ಸಲ್ಲಿಸಿದರು.