ಬೆಂಗಳೂರು: ಪಶ್ಚಿಮ ಘಟ್ಟದ ಪರಿಸರದ ಮೇಲೆ ಹೆಚ್ಚುತ್ತಿರುವ ಒತ್ತಡವನ್ನು ಗಮನದಲ್ಲಿಟ್ಟುಕೊಂಡು, ಇಡೀ ಪಶ್ಚಿಮ ಘಟ್ಟದ ಪರಿಸರ ಧಾರಣ ಸಾಮರ್ಥ್ಯದ ಸಮಗ್ರ ಅಧ್ಯಯನ ನಡೆಸಲು ರಾಜ್ಯ ಜೀವವೈವಿಧ್ಯ ಮಂಡಳಿ ಮುಂದಾಗಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದರು.
ಬೆಂಗಳೂರಿನ ಜೀವವೈವಿಧ್ಯ ಮಂಡಳಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಶ್ಚಿಮ ಘಟ್ಟದಲ್ಲಿ ನಡೆದ ವೈಜ್ಞಾನಿಕ ಅಧ್ಯಯನಗಳ ಕುರಿತು ಸಿದ್ಧಪಡಿಸಲಾದ ವಿಶೇಷ ವರದಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಮಿರಿಸ್ಟಿಕಾ ಸ್ವಾಂಪ್ಸ್ (ರಾಂಪತ್ರೆ ಜಡ್ಡಿ) ಸಂರಕ್ಷಣೆಗೆ ಮಾದರಿ ಯೋಜನೆ ರೂಪಿಸಿ ಜಾರಿಗೊಳಿಸುವಂತೆ ವೃಕ್ಷ ಆಂದೋಲನದ ವತಿಯಿಂದ ಮಂಡಳಿ ಅಧ್ಯಕ್ಷ ವಡ್ನಾಳ್ ಜಗದೀಶ್ ಅವರಿಗೆ ಸಂಸದರ ಮೂಲಕ ಮನವಿ ಸಲ್ಲಿಸಲಾಯಿತು.
ಉತ್ತರ ಕನ್ನಡದ ಅಪ್ಪೇಮಿಡಿಗೆ ಅಘನಾಶಿನಿ ಸಂರಕ್ಷಿತ ಜೀವವೈವಿಧ್ಯ ತಾಣ ಎಂಬ ಮಾನ್ಯತೆ ನೀಡಿರುವುದಕ್ಕೆ ಸಂಸದ ಕಾಗೇರಿ ಅಭಿನಂದನೆ ಸಲ್ಲಿಸಿದರು.
ಯಲ್ಲಾಪುರ ಜೀವವೈವಿಧ್ಯ ಸಮಿತಿ ಈ ಹಿಂದೆ ಆಯೋಜಿಸಿದ್ದ ಕಾರ್ಯಾಗಾರ ರಾಜ್ಯಕ್ಕೇ ಮಾದರಿಯಾಗಿದೆ ಎಂದು ಜೀವವೈವಿಧ್ಯ ಮಂಡಳಿ ಅಧ್ಯಕ್ಷ ವಡ್ನಾಳ್ ಜಗದೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಡಳಿ ಸದಸ್ಯ ಕಾರ್ಯದರ್ಶಿ ಸಂತೋಷ ಕುಮಾರ್ ಅವರು ರಾಷ್ಟ್ರೀಯ ಜೀವವೈವಿಧ್ಯ ಮಂಡಳಿಗೆ ಸಂಸದರ ಮೂಲಕ ಮನವಿ ಸಲ್ಲಿಸಿದರು. ಮಂಡಳಿಯ ಸುಮಾರು 20 ವರ್ಷಗಳ ಇತಿಹಾಸದಲ್ಲಿ ಸಂಸದರೊಬ್ಬರು ಕಾರ್ಯಕ್ರಮಕ್ಕೆ ಆಗಮಿಸಿರುವುದು ಇದೇ ಮೊದಲು ಎಂದು ಮಂಡಳಿ ವಿಜ್ಞಾನಿ ಪ್ರಸನ್ನ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಂಡಳಿಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಡಾ. ಬಾಲಚಂದ್ರ ಸಾಯಿಮನೆ, ಡಾ. ವಿ.ಆರ್. ಹೆಗಡೆ, ನಾರಾಯಣ ಗಡೀಕೈ, ಡಾ. ರಾಜೇಂದ್ರ, ಡಾ. ಪ್ರೀತಮ್, ಪವಿತ್ರ ಹಾಗೂ ವಿಜಯಲಕ್ಷ್ಮಿ ಸೇರಿದಂತೆ ಹಲವರು ಮಾತನಾಡಿದರು.