ಎಪಿಎಂಸಿ ಬಸ್ ನಿಲ್ದಾಣದ ಬಳಿ ಮಟ್ಕಾ ಅಡ್ಡೆ; ಆರೋಪಿ ಬಲೆಗೆ
ಯಲ್ಲಾಪುರ: ಸಾರ್ವಜನಿಕ ಸ್ಥಳದಲ್ಲೇ ಜನರಿಗೆ ಆಮಿಷವೊಡ್ಡಿ ಅಕ್ರಮ ಓ.ಸಿ. ಮಟ್ಕಾ ಜೂಜಾಟ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಯಲ್ಲಾಪುರ ಪೊಲೀಸರು ಖಚಿತ ಮಾಹಿತಿ ಆಧರಿಸಿ ನಡೆಸಿದ ದಾಳಿಯಲ್ಲಿ ಬಂಧಿಸಿದ್ದು, ನಗದು ಹಣ ಹಾಗೂ ಜೂಜಾಟದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಜುಲೈ 28ರಂದು ಸಂಜೆ ಸುಮಾರು 6.35 ಗಂಟೆಗೆ, ಯಲ್ಲಾಪುರ ಪಟ್ಟಣದ ಎಪಿಎಂಸಿ ಬಸ್ ನಿಲ್ದಾಣದ ಸಮೀಪ ನೂತನ ನಗರ-ಜಡ್ಡಿ ನಿವಾಸಿ ಆರೋಪಿತ ಮೋದಿನಸಾಬ್ ಹುಸೇನ ಶೇಖ್ ಸಾರ್ವಜನಿಕರನ್ನು ಸೆಳೆದು, ಒಂದು ರೂಪಾಯಿಗೆ 80 ರೂಪಾಯಿ ನೀಡುವುದಾಗಿ ಆಮಿಷವೊಡ್ಡಿ ಅಂಕೆ-ಸಂಖ್ಯೆಗಳ ಮೇಲೆ ಹಣ ಕಟ್ಟಿಸಿಕೊಂಡು ಓ.ಸಿ. ಮಟ್ಕಾ ಜೂಜಾಟ ನಡೆಸುತ್ತಿದ್ದಾನೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು.
ಮಾಹಿತಿಯ ಬೆನ್ನಲ್ಲೇ ಪೊಲೀಸ್ ಉಪನಿರೀಕ್ಷಕ ರಾಜಶೇಖರ ವಂದಲಿ ನೇತೃತ್ವದ ತಂಡ ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದಿಢೀರ್ ದಾಳಿ ನಡೆಸಿತು. ಪೊಲೀಸರನ್ನು ಕಂಡ ಕೂಡಲೇ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದರೂ, ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆತನನ್ನು ವಶಕ್ಕೆ ಪಡೆದರು.
ದಾಳಿಯ ವೇಳೆ ಆರೋಪಿಯಿಂದ ₹1,400 ನಗದು, ಮಟ್ಕಾ ಅಂಕೆ-ಸಂಖ್ಯೆ ಬರೆದ ಚೀಟಿ ಹಾಗೂ ಒಂದು ಪೆನ್ನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಅಕ್ರಮ ಮಟ್ಕಾ ಜಾಲದ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.