Monday, September 7, 2026
Join WhatsApp Group
HomeLocal Newsಫಲ ಕೈಗೆಟುಕುವ ಹೊತ್ತಲ್ಲೇ ಅಡಿಕೆ ಮರಗಳ ಕಡಿತ

ಫಲ ಕೈಗೆಟುಕುವ ಹೊತ್ತಲ್ಲೇ ಅಡಿಕೆ ಮರಗಳ ಕಡಿತ

ಯಲ್ಲಾಪುರ: ವರ್ಷಗಳ ಕಾಲ ಮಣ್ಣಿನೊಂದಿಗೆ ಬೆವರು ಸುರಿಸಿ ಬೆಳೆಸಿದ ಅಡಿಕೆ ತೋಟ. ಸಾಲ ಮಾಡಿ, ಕಷ್ಟಪಟ್ಟು ಸಾಕಿದ ಗಿಡಗಳು ಮರವಾಗಿ ಬೆಳೆದು, ಇನ್ನೇನು ಫಲ ಕೈಗೆ ಸಿಗಲಿದೆ ಎನ್ನುವ ನಿರೀಕ್ಷೆ. ಆದರೆ ಆ ನಿರೀಕ್ಷೆಯೇ ಈಗ ಕುಟುಂಬದ ಪಾಲಿಗೆ ನೋವಿನ ನೆನಪಾಗಿದೆ. ಯಲ್ಲಾಪುರ ತಾಲೂಕಿನ ಕುಂದರಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಂಬಿ ಗ್ರಾಮದಲ್ಲಿ ಅರಣ್ಯವಾಸಿ ಕುಟುಂಬವೊಂದರ ಸಾಗುವಳಿ ಜಾಗದಲ್ಲಿದ್ದ ಅಡಿಕೆ ಮರಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಡಿದುಕೊಂಡು ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬೆಳ್ಳಂಬಿ ಗ್ರಾಮದ ಕೃಷ್ಣೇ ಸಣ್ಣು ನಾಯ್ಕ್ ಅವರ ಕುಟುಂಬ ಮೂರು ತಲೆಮಾರುಗಳಿಂದ ಇದೇ ಅರಣ್ಯ ಪ್ರದೇಶವನ್ನು ಆಶ್ರಯಿಸಿಕೊಂಡು ಬದುಕು ಕಟ್ಟಿಕೊಂಡಿದೆ. ಮನೆ, ಕೃಷಿ, ಬದುಕಿನ ಆಧಾರ ಎಲ್ಲವೂ ಇದೇ ಜಾಗದ ಸುತ್ತ ಬೆಸೆದುಕೊಂಡಿದೆ. ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ ಅಡಿಕೆ, ತೆಂಗು, ಹಲಸು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಸಿಕೊಂಡು ಕುಟುಂಬ ಜೀವನ ಸಾಗಿಸುತ್ತಿತ್ತು.

ಕುಟುಂಬದವರು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ಅಡಿಕೆ ಮರಗಳನ್ನು ಕಡಿದು ವಾಹನದಲ್ಲಿ ಸಾಗಿಸಿಕೊಂಡು ಹೋಗಿದ್ದಾರೆ ಎಂದು ಕೃಷ್ಣೇ ಸಣ್ಣು ನಾಯ್ಕ್ ಹಾಗೂ ಅವರ ಪುತ್ರ ಸದಾಶಿವ ಸಣ್ಣು ನಾಯ್ಕ್ ಆರೋಪಿಸಿದ್ದಾರೆ. ಈ ಕ್ರಮಕ್ಕೂ ಮುನ್ನ ಯಾವುದೇ ಮುನ್ನೆಚ್ಚರಿಕೆ ನೋಟಿಸ್ ನೀಡಿರಲಿಲ್ಲ ಎಂದೂ ಅವರು ದೂರಿದ್ದಾರೆ.

ಘಟನೆಯ ಮಾಹಿತಿ ತಿಳಿದು ಜಿಲ್ಲಾ ಅರಣ್ಯ ಅತಿಕ್ರಮಣದಾರರ ಹೋರಾಟ ಸಮಿತಿಯ ರವೀಂದ್ರನಾಥ ನಾಯ್ಕ್ ನೇತೃತ್ವದ ತಂಡ ಬೆಳ್ಳಂಬಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದೆ. ಕುಟುಂಬದ ಪರಿಸ್ಥಿತಿಯನ್ನು ಗಮನಿಸಿದ ಸಮಿತಿ, ಅರಣ್ಯವಾಸಿಗಳ ಬದುಕು ಮತ್ತು ಅವರ ಕೃಷಿ ಶ್ರಮವನ್ನು ಪರಿಗಣಿಸಿಯೇ ಇಲಾಖೆಯ ಕ್ರಮಗಳು ನಡೆಯಬೇಕು ಎಂದು ಆಗ್ರಹಿಸಿದೆ.

ಕತ್ತರಿಸಲಾದ ಅಡಿಕೆ ಮರಗಳಿಂದ ಕುಟುಂಬಕ್ಕೆ ಉಂಟಾಗಿರುವ ನಷ್ಟವನ್ನು ಪರಿಗಣಿಸಿ, ಅದೇ ಜಾಗದಲ್ಲಿ ಅರಣ್ಯ ಇಲಾಖೆಯೇ ಅಡಿಕೆ ಗಿಡಗಳನ್ನು ಪುನಃ ನೆಟ್ಟುಕೊಡಬೇಕು ಎಂದು ಸಮಿತಿ ಒತ್ತಾಯಿಸಿದೆ. ಅರಣ್ಯವಾಸಿಗಳ ಬದುಕಿಗೆ ತೊಂದರೆಯಾಗದ ರೀತಿಯಲ್ಲಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕಾಡಿನ ಸಂರಕ್ಷಣೆ ಅಗತ್ಯ. ಅದೇ ವೇಳೆ, ಕಾಡಿನ ನಡುವೆ ತಲೆತಲಾಂತರಗಳಿಂದ ಬದುಕು ಕಟ್ಟಿಕೊಂಡಿರುವ ಜನರ ಬದುಕು, ಅವರ ಶ್ರಮ ಮತ್ತು ಬೆಳೆಗಳ ಬಗ್ಗೆಯೂ ಮಾನವೀಯ ದೃಷ್ಟಿಕೋನ ಅಗತ್ಯ. ಒಂದು ಮರ ಬೆಳೆದು ಫಲ ಕೊಡುವವರೆಗಿನ ವರ್ಷಗಳ ಶ್ರಮವನ್ನು ಒಂದು ಕ್ಷಣದಲ್ಲಿ ಕತ್ತರಿಸಿಬಿಡಬಹುದೇ ಎಂಬ ಪ್ರಶ್ನೆ ಇದೀಗ ಬೆಳ್ಳಂಬಿಯ ಈ ಕುಟುಂಬದ ನೋವಿನ ಮೂಲಕ ಮುನ್ನೆಲೆಗೆ ಬಂದಿದೆ.

ಈ ಬಗ್ಗೆ ಅರಣ್ಯ ಇಲಾಖೆಯ ನಿಲುವು ಹಾಗೂ ಮರಗಳನ್ನು ಕಡಿದಿರುವುದಕ್ಕೆ ಸಂಬಂಧಿಸಿದ ಕಾರಣಗಳು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share