ಯಲ್ಲಾಪುರ: ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಬೈಕ್ ಸ್ಕಿಡ್ ಆಗಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಯಲ್ಲಾಪುರ ತಾಲೂಕಿನ ಹಲಸಿನಕೊಪ್ಪ – ಕನೇನಹಳ್ಳಿ ಮಾರ್ಗದಲ್ಲಿ ನಡೆದಿದೆ.
ಮೃತರನ್ನು ಉಮ್ಮಚಗಿಯ ಹುಣಸೆಮನೆ ಸೋಮಾ ಸುಬ್ಬಾ ಸಿದ್ದಿ (51) ಎಂದು ಗುರುತಿಸಲಾಗಿದೆ.
ಆ.13ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಸೋಮಾ ಸಿದ್ದಿ ಅವರು ತಮ್ಮ ಕೆಎ-31/ವಿ-4767 ಸಂಖ್ಯೆಯ ಮೋಟಾರ್ಸೈಕಲ್ನಲ್ಲಿ ಹಲಸಿನಕೊಪ್ಪದಿಂದ ಕನೇನಹಳ್ಳಿ ಕಡೆಗೆ ತೆರಳುತ್ತಿದ್ದರು. ಈ ವೇಳೆ ಬೈಕ್ ಅನ್ನು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಬಿದ್ದಿದ್ದಾರೆ.
ಅಪಘಾತದಲ್ಲಿ ಅವರ ಬಲ ಕಾಲಿನ ಮೊಣಕಾಲಿಗೆ ಗಂಭೀರ ಗಾಯವಾಗಿದ್ದು, ಗುಪ್ತಾಂಗದ ಭಾಗದಲ್ಲೂ ಗಾಯಗಳಾಗಿದ್ದವು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಕೆ.ಎಸ್. ಹೆಗಡೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಆ.14ರ ಮಧ್ಯರಾತ್ರಿ 12.20ರ ಸುಮಾರಿಗೆ ಸೋಮಾ ಸಿದ್ದಿ ಮೃತಪಟ್ಟಿದ್ದಾರೆ.