ಯಲ್ಲಾಪುರ: ಮದ್ಯದ ಚಟದಿಂದ ಉಂಟಾದ ಕುಟುಂಬ ಕಲಹದ ಹಿನ್ನೆಲೆಯಲ್ಲಿ ಪತ್ನಿ ದೂರವಾದ ನೋವನ್ನು ಮನಸ್ಸಿಗೆ ಹಚ್ಚಿಕೊಂಡಿದ್ದ ವ್ಯಕ್ತಿಯೊಬ್ಬ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಲ್ಲಾಪುರ ಪಟ್ಟಣದ ರವೀಂದ್ರನಗರದಲ್ಲಿ ನಡೆದಿದೆ.
ಮೃತನನ್ನು ಕೂಲಿ ಕಾರ್ಮಿಕ ಸಂತೋಷ ಮನೋಹರ ಪಾಟೀಲ (47) ಎಂದು ಗುರುತಿಸಲಾಗಿದೆ.
ಮೃತನ ಸಹೋದರ ಶ್ರೀಕಾಂತ ಮನೋಹರ ಪಾಟೀಲ ನೀಡಿದ ದೂರಿನ ಪ್ರಕಾರ, ಸಂತೋಷ ಅವರಿಗೆ ಮದ್ಯಪಾನದ ಚಟವಿದ್ದು, ಮದ್ಯ ಸೇವಿಸಿ ಪತ್ನಿ ಅನುಷಾ ಅವರೊಂದಿಗೆ ಪದೇ ಪದೇ ಜಗಳವಾಡುತ್ತಿದ್ದರು. ಇದರಿಂದ ಬೇಸತ್ತು ಪತ್ನಿ ಅವರನ್ನು ಬಿಟ್ಟು ಹೋಗಿದ್ದರು.
ಪತ್ನಿ ದೂರವಾದ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡ ಸಂತೋಷ, ಜೂನ್ 26ರ ಬೆಳಗ್ಗೆ 7 ಗಂಟೆಯಿಂದ ಜೂನ್ 27ರ ಬೆಳಗ್ಗೆ 9.45 ಗಂಟೆಯ ನಡುವಿನ ಅವಧಿಯಲ್ಲಿ ತಮ್ಮ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಮಹಾವೀರ ಕಾಂಬಳೆ ತನಿಖೆ ಕೈಗೊಂಡಿದ್ದಾರೆ.