Saturday, May 30, 2026
HomeStateಪ್ರಿಯಾಂಕ್ ಖರ್ಗೆ–ಬಿಜೆಪಿ ನಡುವೆ ಟ್ವೀಟ್ ವಾರ್!

ಪ್ರಿಯಾಂಕ್ ಖರ್ಗೆ–ಬಿಜೆಪಿ ನಡುವೆ ಟ್ವೀಟ್ ವಾರ್!

ಕಲಬುರಗಿ: 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ರಾಜ್ಯದಲ್ಲಿ ವಿದ್ಯಾರ್ಥಿಗಳ ಸಂಭ್ರಮ ಜೋರಾಗಿದೆ. ಅನೇಕ ವಿದ್ಯಾರ್ಥಿಗಳು ಅತ್ಯಧಿಕ ಅಂಕಗಳನ್ನು ಪಡೆದು ಸಾಧನೆ ಮೆರೆದಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಮತ್ತೊಂದೆಡೆ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲೇ ಉಳಿದಿರುವುದು ಚರ್ಚೆಗೆ ಗ್ರಾಸವಾಗಿದೆ.

ಈ ವಿಚಾರ ಇದೀಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಬಿಜೆಪಿ ನಾಯಕರ ನಡುವೆ ತೀವ್ರ ಟ್ವೀಟ್ ವಾರ್‌ಗೆ ಕಾರಣವಾಗಿದೆ.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, “ಕಲಬುರಗಿಯ ವಿದ್ಯಾರ್ಥಿಗಳನ್ನು ಅವಮಾನಿಸುತ್ತಿರುವ ಬಿಜೆಪಿ ಅವರ ಆತ್ಮವಿಶ್ವಾಸ ಕುಗ್ಗಿಸುವ ಪ್ರಯತ್ನ ಮಾಡುತ್ತಿದೆ. ಸಮಸ್ಯೆ ಇದ್ದರೆ ನನ್ನನ್ನು ಟೀಕಿಸಿ, ಮಕ್ಕಳನ್ನು ಏಕೆ ಅಪಹಾಸ್ಯ ಮಾಡುತ್ತಿದ್ದೀರಿ?” ಎಂದು ಪ್ರಶ್ನಿಸಿದರು.

“ಜಿಲ್ಲೆಯ ಫಲಿತಾಂಶ ಶೇ.85ರಷ್ಟಿದ್ದು, ಕಳೆದ ವರ್ಷದಿಗಿಂತ ಉತ್ತಮ ಸಾಧನೆ ಕಂಡಿದೆ. ನಮ್ಮ ಜಿಲ್ಲೆಯ ಮಕ್ಕಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸುವ ಶಕ್ತಿ ಇದೆ. ಆದರೆ ಪ್ರತಿ ಬಾರಿ ಕಲಬುರಗಿಯ ಮಕ್ಕಳನ್ನು ಅವಮಾನಿಸುವ ಮೂಲಕ ಬಿಜೆಪಿ ತನ್ನ ರಾಜಕೀಯ ದಿವಾಳಿತನ ತೋರಿಸುತ್ತಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಯಾಗಿ ರಾಜ್ಯ ಬಿಜೆಪಿ, “ನಿಮ್ಮ ವೈಫಲ್ಯ ಮುಚ್ಚಿಕೊಳ್ಳಲು ಮುಗ್ಧ ಮಕ್ಕಳ ಹಿಂದೆ ಅಡಗಿ ಟ್ವೀಟ್ ಮಾಡುವುದನ್ನು ಬಿಡಿ. ಕಲಬುರಗಿಯ ಮಕ್ಕಳು ಪ್ರತಿಭಾವಂತರು. ನಾವು ಪ್ರಶ್ನಿಸಿದ್ದು ಮಕ್ಕಳನ್ನು ಅಲ್ಲ, ಅವರಿಗೆ ಸೂಕ್ತ ಶಿಕ್ಷಣ ವಾತಾವರಣ ಕಲ್ಪಿಸದ ನಿಮ್ಮ ಕುಟುಂಬದ ದಶಕಗಳ ಅಸಮರ್ಥ ಆಡಳಿತವನ್ನು” ಎಂದು ಕಿಡಿಕಾರಿದೆ.

“ನಿಮ್ಮ ಕುಟುಂಬ ಕಲಬುರಗಿಯನ್ನು ಹಲವು ಬಾರಿ ಪ್ರತಿನಿಧಿಸಿದೆ. ಆದರೆ ಅಭಿವೃದ್ಧಿ ಮಾತ್ರ ಶೂನ್ಯ. ಶಿಕ್ಷಣದಿಂದ ಹಿಡಿದು ತಲಾದಾಯವರೆಗೂ ಜಿಲ್ಲೆಯು ಹಿಂದುಳಿದಿದೆ. ನೀವು ಅಧಿಕಾರದಿಂದ ದೂರವಾದರೆ, ‘ಕೊನೆಯ ಸ್ಥಾನದ ಶಾಪ’ದಿಂದಾದರೂ ಕಲಬುರಗಿ ಮುಕ್ತಿ ಪಡೆಯಬಹುದು” ಎಂದು ಬಿಜೆಪಿ ಟೀಕಿಸಿದೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶದ ವಿಚಾರ ಇದೀಗ ಶಿಕ್ಷಣದ ಗಡಿಯನ್ನು ದಾಟಿ ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಟ್ವೀಟ್ ವಾರ್ ಭಾರೀ ಚರ್ಚೆಗೆ ಕಾರಣವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share