ಮಂಡ್ಯ: ರಾಜಕೀಯ ಹಾಗೂ ಪ್ರಕೃತಿಯಲ್ಲಿ ನಡೆಯುವ ಹಲವು ಮಹತ್ವದ ಬದಲಾವಣೆಗಳ ಕುರಿತು ಆಗಾಗ ಭವಿಷ್ಯ ನುಡಿಯುವ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಇದೀಗ ಮತ್ತೆ ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.
ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಮದಲ್ಲಿ ನಡೆದ ಶ್ರೀ ಬಂಡೆ ಶನೇಶ್ವರಸ್ವಾಮಿಯ ಜಾತ್ರಾ ಮಹೋತ್ಸವ ಹಾಗೂ ಮಹಾ ರಾಜಗೋಪುರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶ್ರೀಗಳು, ಮುಂದಿನ ದಿನಗಳಲ್ಲಿ ದೇಶದಲ್ಲಿ ಅನ್ನ ಮತ್ತು ಕುಡಿಯುವ ನೀರಿಗೆ ತೀವ್ರ ಸಂಕಷ್ಟ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ದೇಶದಲ್ಲಿ ಹವಾಮಾನದ ಏರುಪೇರುಗಳು ಗಂಭೀರ ಸ್ವರೂಪ ತಾಳುತ್ತಿವೆ. ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದಲ್ಲಿ ವಿಪರೀತ ಏರಿಕೆ ಇವುಗಳ ಸಂಯೋಜನೆಯಿಂದ ಭೂಮಿ ಮತ್ತು ನೀರಿನ ಸಾಮರ್ಥ್ಯ ಕುಸಿಯಲಿದೆ. ಇದರ ಪರಿಣಾಮ ಬೆಳೆ ವಿಫಲವಾಗಿ, ಕೃಷಿಕರು ತೀವ್ರ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ.
ಕೃಷಿ ಉತ್ಪನ್ನದ ಕೊರತೆಯಿಂದ ಆಹಾರದ ದರಗಳು ಆಕಾಶ ಮುಟ್ಟುವ ಸಾಧ್ಯತೆ ಇದೆ. ಕುಡಿಯುವ ನೀರಿನ ಬಾವಿಗಳು, ಕೆರೆಗಳು ಬತ್ತಿಹೋಗಬಹುದು. ಸಾರ್ವಜನಿಕ ಆರೋಗ್ಯದ ಮೇಲೂ ವ್ಯಾಪಕ ಪರಿಣಾಮ ಉಂಟಾಗಲಿದೆ. ಜೊತೆಗೆ ಅಪಮೃತ್ಯುಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಬಹುದು ಎಂದು ಆತಂಕಕಾರಿ ಮುನ್ಸೂಚನೆ ನೀಡಿದರು.
ಇದೇ ವೇಳೆ ಕರ್ನಾಟಕದ ಕುರಿತು ಸಮಾಧಾನದ ಸುದ್ದಿಯನ್ನೂ ಹಂಚಿಕೊಂಡ ಅವರು, ದೇಶಾದ್ಯಂತ ಈ ತೊಂದರೆಗಳು ಕಾಡಿದರೂ ಕರ್ನಾಟಕ ರಾಜ್ಯಕ್ಕೆ ಮಾತ್ರ ಯಾವುದೇ ದೊಡ್ಡ ಮಟ್ಟದ ಗಂಡಾಂತರ ಅಥವಾ ಅನಾಹುತಗಳು ಸಂಭವಿಸುವುದಿಲ್ಲ ಎಂದು ಹೇಳಿದ್ದಾರೆ.