ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಶಿವರಾಮ ಹೆಬ್ಬಾರ
ಯಲ್ಲಾಪುರ: ಪರಿಸರ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಯ ಹೊಣೆಗಾರಿಕೆಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಹವಾಮಾನ ಬದಲಾವಣೆ, ಅರಣ್ಯ ನಾಶ ಹಾಗೂ ಪರಿಸರ ಅಸಮತೋಲನದ ಸವಾಲುಗಳನ್ನು ಎದುರಿಸಲು ವೃಕ್ಷಾರೋಪಣ ಮತ್ತು ಪ್ರಕೃತಿ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಯಲ್ಲಾಪುರ-ಮುಂಡಗೋಡ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಕರೆ ನೀಡಿದರು.
ಅವರು “ಪ್ರಕೃತಿ ಪ್ರೇರಿತ, ನಮ್ಮ ಹವಾಮಾನ – ನಮ್ಮ ಭವಿಷ್ಯ” ಎಂಬ ಧ್ಯೇಯವಾಕ್ಯದಡಿ ಯಲ್ಲಾಪುರ ಅರಣ್ಯ ವಿಭಾಗದ ಸಸ್ಯೋದ್ಯಾನದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ-2026 ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್ ಅಜೀಜ್ ಶೇಖ್, ಖ್ಯಾತ ವೈದ್ಯ ಡಾ. ಸತೀಶ್ ಭಟ್ ಕಣ್ಣಿ ಹಾಗೂ ವೈಟಿಎಸ್ಎಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ವೃಕ್ಷಾರೋಪಣದಲ್ಲಿ ಭಾಗವಹಿಸಿ ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು.
ಈ ಸಂದರ್ಭದಲ್ಲಿ ಶಾಸಕ ಶಿವರಾಮ ಹೆಬ್ಬಾರ ಅವರು ಕಾಡುಪ್ರಾಣಿ ದಾಳಿಯಿಂದ ಗಾಯಗೊಂಡು ಅಂಗವೈಕಲ್ಯಕ್ಕೊಳಗಾದ ಸಂತ್ರಸ್ತರು ಹಾಗೂ ಕರ್ತವ್ಯ ನಿರ್ವಹಣೆಯ ವೇಳೆ ಮೃತಪಟ್ಟ ದಿನಗೂಲಿ ನೌಕರರ ಕುಟುಂಬಗಳಿಗೆ ಅರಣ್ಯ ಇಲಾಖೆಯಿಂದ ಮಂಜೂರಾದ ದಯಾತ್ಮಕ ಧನ ಮತ್ತು ಮಾಸಾಶನಕ್ಕೆ ಸಂಬಂಧಿಸಿದ ಅಧಿಕೃತ ಆದೇಶ ಪತ್ರಗಳನ್ನು ವಿತರಿಸಿದರು.
ಚಂದಗುಳಿ ಗ್ರಾಮದ ರಾಮಕೃಷ್ಣ ಸುಬ್ರಾಯ ಭಟ್ ಅವರಿಗೆ ಕರಡಿ ದಾಳಿಯಿಂದ ಅಂಗವೈಕಲ್ಯ ಉಂಟಾದ ಹಿನ್ನೆಲೆಯಲ್ಲಿ ₹10 ಲಕ್ಷ ದಯಾತ್ಮಕ ಧನ ಹಾಗೂ ಪ್ರತಿ ತಿಂಗಳು ₹4 ಸಾವಿರ ಮಾಸಾಶನ ಮಂಜೂರಾದ ಆದೇಶ ಪತ್ರ ವಿತರಿಸಲಾಯಿತು. ಕಿರವತ್ತಿ ವಲಯದ ಮಂಗ್ಯಾನ ತಾವರಗೇರಿಯ ಬಾಬು ಗಂಗು ಕೊಕ್ಕರೆ ಅವರಿಗೆ ಕಾಡುಹಂದಿ ದಾಳಿಯಿಂದ ಅಂಗವೈಕಲ್ಯ ಉಂಟಾದ ಕಾರಣ ₹10 ಲಕ್ಷ ಪರಿಹಾರ ಹಾಗೂ ₹4 ಸಾವಿರ ಮಾಸಾಶನದ ಆದೇಶ ನೀಡಲಾಯಿತು.
ಇದೇ ವೇಳೆ ಚಿಮಣಿಮಾಳದ ಗೋದಿ ಜಾನು ಜಂಗಳೆ, ಅಂದಲಗಿಯ ದ್ಯಾಮಣ್ಣ ನಾಗಪ್ಪ ಬೆಂಡಿಗೇರಿ ಹಾಗೂ ಚವಡಳ್ಳಿಯ ನಾಗುಬಾಯಿ ಜಾನು ವರಕ ಅವರಿಗೆ ಕರಡಿ ದಾಳಿಯಿಂದ ಉಂಟಾದ ಅಂಗವೈಕಲ್ಯದ ಹಿನ್ನೆಲೆಯಲ್ಲಿ ತಲಾ ₹5 ಲಕ್ಷ ದಯಾತ್ಮಕ ಧನ ಮಂಜೂರಾದ ಆದೇಶ ಪತ್ರ ವಿತರಿಸಲಾಯಿತು.
ಇಡಗುಂದಿ ವಲಯದ ವಜ್ರಳ್ಳಿಯ ಜೂಜೆ ಲೂಯಿಸ್ ಸಿದ್ದಿ ಅವರು ಬೆಂಕಿ ನಂದಿಸುವ ವೇಳೆ ಹೈವೋಲ್ಟೇಜ್ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ವಿಶೇಷ ಅನುಕಂಪದಡಿ ₹5 ಲಕ್ಷ ಪರಿಹಾರ ಧನ ಮಂಜೂರಾದ ಆದೇಶ ಪತ್ರವನ್ನು ಹಸ್ತಾಂತರಿಸಲಾಯಿತು.
ಪರಿಸರ ಸಂರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಪರಿಸರ ಘೋಷಣೆಗಳ ಫಲಕಗಳನ್ನು ಸೈಕಲ್ಗಳಿಗೆ ಅಳವಡಿಸಿಕೊಂಡು ಸೈಕಲ್ ಜಾಥಾ ನಡೆಸಿದರು. ಶಾಸಕ ಶಿವರಾಮ ಹೆಬ್ಬಾರ ಹಸಿರು ನಿಶಾನೆ ತೋರಿಸುವ ಮೂಲಕ ಜಾಥಾಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಯಲ್ಲಾಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್, ಮುಂಡಗೋಡ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿ ಹುಲಕೋಟಿ, ಮಂಚಿಕೇರಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂಗಮೇಶ ಪ್ರಭಾಕರ, ಯಲ್ಲಾಪುರ ವಲಯ ಅರಣ್ಯಾಧಿಕಾರಿ ನರೇಶ್ ಜಿ.ವಿ., ಕಿರವತ್ತಿ ವಲಯ ಅರಣ್ಯಾಧಿಕಾರಿ ಅಜಯ ನಾಯ್ಕ, ಮಂಚಿಕೇರಿ ವಲಯ ಅರಣ್ಯಾಧಿಕಾರಿ ಬಸವರಾಜ ಬೋಚಳ್ಳಿ, ಇಡಗುಂದಿ ವಲಯ ಅರಣ್ಯಾಧಿಕಾರಿ ಎಂ.ಎಚ್. ನಾಯ್ಕ, ವಿಭಾಗೀಯ ಸರ್ವೇ ವಲಯ ಅರಣ್ಯಾಧಿಕಾರಿ ಪ್ರಸಾದ್ ಪೆಡ್ನೇಕರ್ ಸೇರಿದಂತೆ ವಿವಿಧ ವಲಯಗಳ ಅರಣ್ಯ ಸಿಬ್ಬಂದಿ, ದಿನಗೂಲಿ ನೌಕರರು, ಸಾರ್ವಜನಿಕರು ಹಾಗೂ ವೈಟಿಎಸ್ಎಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.