Friday, June 19, 2026
HomeCrimeಕಾಲ ಸರಿಯಿಲ್ಲ ಎಚ್ಚರ!

ಕಾಲ ಸರಿಯಿಲ್ಲ ಎಚ್ಚರ!

ಮೊಬೈಲ್ ಗೇಮಿಂಗ್ ವ್ಯಸನದ ಕರಾಳ ಮುಖ | ಗಂಗಾವತಿಯಲ್ಲಿ ನಡೆಯಿತು ಭಯ ಹುಟ್ಟಿಸುವ ಘಟನೆ

ಗಂಗಾವತಿ: ಆನ್‌ಲೈನ್ ಗೇಮಿಂಗ್ ವ್ಯಸನ ಯುವಜನರ ಮನಸ್ಥಿತಿಯ ಮೇಲೆ ಎಷ್ಟರ ಮಟ್ಟಿಗೆ ದುಷ್ಪರಿಣಾಮ ಬೀರುತ್ತಿದೆ ಎಂಬುದಕ್ಕೆ ನಡುಕ ಹುಟ್ಟಿಸುವ ಘಟನೆಯೊಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೊಸ ಅಯೋಧ್ಯೆ ಗ್ರಾಮದಲ್ಲಿ ನಡೆದಿದೆ.

ಮೊಬೈಲ್‌ನಲ್ಲಿ ಅತಿಯಾದ ಸಮಯ ಕಳೆಯುತ್ತಿದ್ದ 17 ವರ್ಷದ ಅಪ್ರಾಪ್ತ ಬಾಲಕನೊಬ್ಬ, ಗೇಮ್ ಆಡುವುದನ್ನು ಕಡಿಮೆ ಮಾಡುವಂತೆ ಬುದ್ಧಿವಾದ ಹೇಳಿದ್ದ ತಂದೆ ಮತ್ತು ಅಕ್ಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ತಾಯಿಯೂ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತರನ್ನು ಖಾಸಗಿ ಶಾಲೆಯೊಂದರಲ್ಲಿ ಅಡುಗೆ ಭಟ್ಟರಾಗಿ ಕೆಲಸ ಮಾಡುತ್ತಿದ್ದ ವೆಂಕಟ ನಾಯ್ಡು ಹಾಗೂ ಪದವಿ ವ್ಯಾಸಂಗ ಮಾಡುತ್ತಿದ್ದ ಅವರ ಪುತ್ರಿ ಪ್ರಗತಿ ಎಂದು ಗುರುತಿಸಲಾಗಿದೆ. ಕುಟುಂಬವು ಹೊಸ ಅಯೋಧ್ಯೆ ಗ್ರಾಮದಲ್ಲಿ ಜಂಟಿ ಕುಟುಂಬವಾಗಿ ವಾಸಿಸುತ್ತಿತ್ತು. ಆರೋಪಿ ಬಾಲಕ ತಂದೆ ಕೆಲಸ ಮಾಡುತ್ತಿದ್ದ ಅದೇ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಎನ್ನಲಾಗಿದೆ.

ಬಾಲಕ ಕಳೆದ ಕೆಲವು ತಿಂಗಳುಗಳಿಂದ ಆನ್‌ಲೈನ್ ಗೇಮ್‌ಗಳಿಗೆ ಅತಿಯಾಗಿ ಒಲವು ತೋರಿದ್ದ. ಓದು ಮತ್ತು ಇತರ ಚಟುವಟಿಕೆಗಳಿಗಿಂತ ಮೊಬೈಲ್‌ಗೇ ಹೆಚ್ಚು ಸಮಯ ಮೀಸಲಿಡುತ್ತಿದ್ದ ಹಿನ್ನೆಲೆಯಲ್ಲಿ ಪೋಷಕರು ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಶನಿವಾರ ಸಂಜೆ ಸಹ ಇದೇ ವಿಚಾರವಾಗಿ ಮನೆಯಲ್ಲಿ ಮಾತಿನ ಚಕಮಕಿ ನಡೆದಿತ್ತು ಎಂದು ತಿಳಿದುಬಂದಿದೆ.

ಅಂದು ರಾತ್ರಿ ಕುಟುಂಬದವರು ಒಟ್ಟಿಗೆ ಊಟ ಮುಗಿಸಿ ಮಲಗಿದ್ದರು. ರಾತ್ರಿ ಸುಮಾರು 10.30ರ ವೇಳೆಗೆ ಕೊಠಡಿಯೊಳಗಿಂದ ಸಹಾಯಕ್ಕಾಗಿ ಕಿರುಚಾಟ ಕೇಳಿಬಂದಿದೆ. ಪಕ್ಕದ ಕೊಠಡಿಯಲ್ಲಿ ಮಲಗಿದ್ದ ತಾತ ತಕ್ಷಣ ಬಾಗಿಲು ತೆರೆಯಲು ಯತ್ನಿಸಿದರೂ ಒಳಗಿನಿಂದ ಲಾಕ್ ಆಗಿದ್ದ ಕಾರಣ ಸಾಧ್ಯವಾಗಿಲ್ಲ. ಬಳಿಕ ನೆರೆಹೊರೆಯವರ ನೆರವಿನಿಂದ ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ, ವೆಂಕಟ ನಾಯ್ಡು, ಅವರ ಪತ್ನಿ ಮತ್ತು ಪುತ್ರಿ ಪ್ರಗತಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ.

ತೀವ್ರ ಇರಿತಕ್ಕೊಳಗಾಗಿದ್ದ ಪ್ರಗತಿ ಸ್ಥಳದಲ್ಲೇ ಮೃತಪಟ್ಟರೆ, ವೆಂಕಟ ನಾಯ್ಡು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ತಾಯಿಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ತಂದೆ ತಾತಾರಾವ್ ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಾಗಿದ್ದು, ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ ಎಂದು ತಿಳಿದುಬಂದಿದೆ.

ಈ ದುರಂತವನ್ನು ಕೇವಲ ಒಂದು ಅಪರಾಧ ಪ್ರಕರಣವಾಗಿ ನೋಡುವುದಕ್ಕಿಂತ, ಇಂದಿನ ಡಿಜಿಟಲ್ ಯುಗದ ಗಂಭೀರ ಸಾಮಾಜಿಕ ಸಮಸ್ಯೆಯ ಪ್ರತಿಬಿಂಬವಾಗಿ ಅರ್ಥೈಸಬೇಕಿದೆ. ಮೊಬೈಲ್, ಆನ್‌ಲೈನ್ ಗೇಮಿಂಗ್ ಮತ್ತು ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ಮಕ್ಕಳಲ್ಲಿ ಏಕಾಂಗಿತನ, ಕೋಪ, ಅಸಹನೆ ಹಾಗೂ ವಾಸ್ತವ ಬದುಕಿನಿಂದ ದೂರವಾಗುವ ಪ್ರವೃತ್ತಿಯನ್ನು ಹೆಚ್ಚಿಸುತ್ತಿದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.

ಆದರೆ ಈ ಘಟನೆಯನ್ನು ಕೇವಲ ಗೇಮಿಂಗ್‌ಗೆ ಮಾತ್ರ ನೇರವಾಗಿ ಜೋಡಿಸುವುದೂ ಸರಿಯಲ್ಲ. ಮಾನಸಿಕ ಆರೋಗ್ಯ, ಕುಟುಂಬದ ಸಂವಹನ, ಭಾವನಾತ್ಮಕ ನಿಯಂತ್ರಣ, ಸಾಮಾಜಿಕ ವಾತಾವರಣ ಸೇರಿದಂತೆ ಹಲವು ಅಂಶಗಳು ಇಂತಹ ದುರಂತಗಳ ಹಿಂದೆ ಇರಬಹುದು. ಆದ್ದರಿಂದ ಮಕ್ಕಳ ಮೊಬೈಲ್ ಬಳಕೆಯ ಮೇಲೆ ನಿಗಾ ಇಡುವುದರ ಜೊತೆಗೆ, ಅವರೊಂದಿಗೆ ಮುಕ್ತ ಸಂವಾದ ನಡೆಸುವುದು, ಭಾವನೆಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸುವುದು ಮತ್ತು ಅಗತ್ಯವಿದ್ದಲ್ಲಿ ತಜ್ಞರ ಸಲಹೆ ಪಡೆಯುವುದು ಅತ್ಯಂತ ಮುಖ್ಯ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share