ಯಲ್ಲಾಪುರ: ಪರಿಸರ ಹೋರಾಟ, ಸಾಮಾಜಿಕ ಸೇವೆ ಹಾಗೂ ನದಿ-ಅರಣ್ಯ ಸಂರಕ್ಷಣಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ವಿನಾಯಕ ಉಪಾಧ್ಯ ಕಳಚೆ (ಕನಕನಹಳ್ಳಿ) ಬುಧವಾರ ಸಂಜೆ ಹೃದಯಾಘಾತದಿಂದ ನಿಧನರಾದರು.
ವಿನಾಯಕ ಉಪಾಧ್ಯ ಅವರು ವೃಕ್ಷಲಕ್ಷ ಆಂದೋಲನದ ಸಕ್ರಿಯ ಕಾರ್ಯಕರ್ತರಾಗಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘ ಸೇರಿದಂತೆ ವಿವಿಧ ಸಾಮಾಜಿಕ ಸಂಘಟನೆಗಳ ಮೂಲಕ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚಿನ ಬೇಡ್ತಿ ನದಿ ತಿರುವು ಹೋರಾಟದಲ್ಲೂ ಅವರು ಮುಂಚೂಣಿಯಲ್ಲಿ ಭಾಗವಹಿಸಿ ಪರಿಸರ ಸಂರಕ್ಷಣೆಯ ಧ್ವನಿಯಾಗಿದ್ದರು.
ಹಲವು ವರ್ಷಗಳ ಹಿಂದೆ ಬಿಸಗೋಡು ಹಾಗೂ ತಳಕೆಬೈಲ್ ಭಾಗದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ವಿರುದ್ಧ ನಡೆದ ಹೋರಾಟದಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು. ಆ ಸಂದರ್ಭದಲ್ಲಿ ಅನಂತ ಅಶೀಸರ ಅವರೊಂದಿಗೆ ಸೇರಿ ತಳಕೆಬೈಲ್ ಪ್ರದೇಶದ ಅಕ್ರಮ ಗಣಿಗಾರಿಕೆಯನ್ನು ತಡೆಗಟ್ಟುವ ಹೋರಾಟದಲ್ಲಿ ಶ್ರಮಿಸಿ ಯಶಸ್ಸು ಸಾಧಿಸಿದ್ದರು.
ಪರಿಸರದ ಬಗ್ಗೆ ಅಪಾರ ಕಾಳಜಿ ಮತ್ತು ಜಾಗೃತ ಮನೋಭಾವವನ್ನು ಹೊಂದಿದ್ದ ಅವರು ಸಮಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದರು.
ಕಳಚೆಯ ಸಹ್ಯಾದ್ರಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಸಹಕಾರಿ ಸಂಘದಲ್ಲಿಯೂ ಅವರು ಈ ಹಿಂದೆ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಘದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಮೃತರ ಗೌರವಾರ್ಥ ಸಂಘದ ಪ್ರಧಾನ ಕಚೇರಿಯಲ್ಲಿ ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿಸಂಘದ ಅಧ್ಯಕ್ಷ ಉಮಾಮಹೇಶ್ವರ ಭಾಗ್ವತ್, ಉಪಾಧ್ಯಕ್ಷ ರಾಘವೇಂದ್ರ ಭಟ್ಟ ಕೊಣೆಮನೆ, ನಿರ್ದೇಶಕ ರಾಘವೇಂದ್ರ ಭಟ್ಟ ಸುತ್ರೆ, ಮಾಜಿ ನಿರ್ದೇಶಕ ನಾರಾಯಣ ಗಾಂವ್ಕರ್, ವೇದಮೂರ್ತಿ ಗಣಪತಿ ಭಟ್ಟ ಅಪ್ರತೋಟ, ಸಹಾಯಕ ವ್ಯವಸ್ಥಾಪಕರಾದ ಪ್ರಮೋದ ಹೆಬ್ಬಾರ್, ಗಣಪತಿ ಗಾಂವ್ಕರ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.