ಬನವಾಸಿ: ಬನವಾಸಿ ಸಮೀಪ ಪೊಲೀಸರು ಹಾಗೂ ಆಹಾರ ಇಲಾಖೆಯ ಜಂಟಿ ಕಾರ್ಯಾಚರಣೆಯಲ್ಲಿ 1.75 ಟನ್ಗೂ ಅಧಿಕ ಪ್ರಮಾಣದ ಸರ್ಕಾರಿ ಪಡಿತರ ಅಕ್ಕಿ ವಶಕ್ಕೆ ಪಡೆಯಲಾಗಿದೆ.
ಅನ್ನಭಾಗ್ಯ ಯೋಜನೆಯಡಿ ಸರ್ಕಾರದಿಂದ ಬಡವರಿಗೆ ವಿತರಿಸುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಗಿಸುತ್ತಿದ್ದ ಆರೋಪದಡಿ ಚಾಲಕನೊಬ್ಬನ ವಿರುದ್ಧ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕೊರಕೋಡ-ಕುಪಗಡ್ಡೆ ನಿವಾಸಿ ಸಚಿನ್ ತಂದೆ ನಾಗರಾಜ ಗೌಡ (26) ಎಂದು ಗುರುತಿಸಲಾಗಿದೆ.
ಜುಲೈ 26ರ ರಾತ್ರಿ ಸುಮಾರು 11.50ಕ್ಕೆ ಬನವಾಸಿ–ದಾಸನಕೊಪ್ಪ ರಸ್ತೆಯ ದಾಸನಕೊಪ್ಪ ಕ್ರಾಸ್ ಬಳಿ ತಹಶೀಲ್ದಾರ್ ಕಚೇರಿಯ ಸೂಚನೆಯಂತೆ ಆಹಾರ ಇಲಾಖೆ ಹಾಗೂ ಬನವಾಸಿ ಪೊಲೀಸ್ ಸಿಬ್ಬಂದಿ ಜಂಟಿಯಾಗಿ ವಾಹನ ತಪಾಸಣೆ ನಡೆಸಿದರು. ಈ ವೇಳೆ ಕೆಎ-51/ಎಬಿ-5750 ಸಂಖ್ಯೆಯ ವಾಹನದಲ್ಲಿ 33 ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ್ದ ಒಟ್ಟು 1,750 ಕೆ.ಜಿ. 4 ಗ್ರಾಂ (1.75 ಟನ್) ಪಡಿತರ ಅಕ್ಕಿಯನ್ನು ಪತ್ತೆಹಚ್ಚಿದರು.
ಪರಿಶೀಲನೆಯ ವೇಳೆ, ಈ ಅಕ್ಕಿಯು ಅನ್ನಭಾಗ್ಯ ಯೋಜನೆಯಡಿ ಸರ್ಕಾರದಿಂದ ವಿತರಿಸಲಾಗುವ ಪಡಿತರ ಅಕ್ಕಿಯೇ ಆಗಿದೆ ಎಂದು ಆಹಾರ ನಿರೀಕ್ಷಕಿ ಕವಿತಾ ಎಸ್. ಪಾಟಣಕರ ಖಚಿತಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಅಕ್ಕಿಯ ಅಂದಾಜು ಮೌಲ್ಯ ₹59,501.36 ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕರಿಂದ ಕಡಿಮೆ ಬೆಲೆಗೆ ಪಡಿತರ ಅಕ್ಕಿಯನ್ನು ಸಂಗ್ರಹಿಸಿ, ಯಾವುದೇ ಪರವಾನಗಿ ಇಲ್ಲದೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸೊರಬ ಕಡೆಗೆ ಸಾಗಿಸುತ್ತಿದ್ದ ಆರೋಪದ ಮೇರೆಗೆ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.