ಹೊನ್ನಾವರ: ಕೋಳಿ ಹುಂಜಗಳನ್ನು ಕಾದಾಟಕ್ಕೆ ಬಿಟ್ಟು, ಅವುಗಳ ಮೇಲೆ ಹಣದ ಪಂಥ ಕಟ್ಟಿ ಜೂಜಾಟ ನಡೆಸುತ್ತಿದ್ದ ಆರು ಮಂದಿಯನ್ನು ಹೊನ್ನಾವರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಬಂಧಿತರನ್ನು ಹಳದಿಪುರ ಅಗ್ರಹಾರದ ಶಿವಾನಂದ ಮಾಸ್ತಿ ಮುಕ್ರಿ, ಕುಮಟಾ-ಹೆಗಡೆಯ ಪ್ರಶಾಂತ ಗಣಪತಿ ಮುಕ್ರಿ, ಹಳದಿಪುರ ಅಗ್ರಹಾರದ ವಿನೋದ ಕಣಿಯಾ ಮುಕ್ರಿ, ಹಳದಿಪುರ ಬಡಗಣಿಯ ಮಂಜುನಾಥ ನಾರಾಯಣ ಮುಕ್ರಿ, ಹೊನ್ನಾವರ ದುಗ್ಗೂರಿನ ಈಶ್ವರ ಮಲ್ಲೇಶ ಗೌಡ, ಕುಮಟಾ ಮೂರೂರಿನ ಶ್ರೀರಾಮ ತಂದೆ ಗಣಪತಿ ಮಡಿವಾಳ ಎಂದು ಗುರುತಿಸಲಾಗಿದೆ.
ಜುಲೈ 26ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಹೊನ್ನಾವರ ತಾಲೂಕಿನ ಹಳದಿಪುರ ಚಂಡೇಶ್ವರ ಸ್ಮಶಾನದ ಸಮೀಪದ ಅರಣ್ಯ ಪ್ರದೇಶದಲ್ಲಿ ಆರೋಪಿತರು ಕೋಳಿ ಹುಂಜಗಳನ್ನು ಕಾದಾಟಕ್ಕೆ ಬಿಟ್ಟು, ಅವುಗಳ ಮೇಲೆ ಹಣದ ಪಂಥ ಕಟ್ಟಿಕೊಂಡು ಕೋಳಿ ಅಂಕ ನಡೆಸುತ್ತಿದ್ದರೆಂಬ ಖಚಿತ ಮಾಹಿತಿಯ ಮೇರೆಗೆ ಹೊನ್ನಾವರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಿದ್ಧರಾಮೇಶ್ವರ ಎಸ್. ನೇತೃತ್ವದ ತಂಡ ದಾಳಿ ನಡೆಸಿತು.
ದಾಳಿಯ ವೇಳೆ ಆರೋಪಿತರು ಜೂಜಾಟ ನಡೆಸುತ್ತಿದ್ದುದನ್ನು ಪೊಲೀಸರು ಪತ್ತೆಹಚ್ಚಿದ್ದು, ಜೂಜಾಟಕ್ಕೆ ಬಳಸುತ್ತಿದ್ದ ಸ್ವತ್ತುಗಳನ್ನು ವಶಪಡಿಸಿಕೊಂಡು ಆರು ಮಂದಿಯನ್ನು ಬಂಧಿಸಿದರು. ಬಳಿಕ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.