Monday, September 7, 2026
Join WhatsApp Group
HomeLocal Storyಗ್ರಾಮೀಣ ಸೇವೆಗೆ ರಾಜ್ಯಮಟ್ಟದ ಮನ್ನಣೆ

ಗ್ರಾಮೀಣ ಸೇವೆಗೆ ರಾಜ್ಯಮಟ್ಟದ ಮನ್ನಣೆ

ಲೋಕ ಭವನದ ವಿಶೇಷ ಆತಿಥ್ಯದಲ್ಲಿ ಯಲ್ಲಾಪುರದ ಪ್ರಕಾಶ್ ಹೆಗಡೆ ಕೇರಿದೀಪಾ ಹೆಗಡೆ ಭಾಗಿ

ಯಲ್ಲಾಪುರ: ಸಾಮಾನ್ಯವಾಗಿ ರಾಜ್ಯದ ಗಣ್ಯರು, ಸಾಧಕರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದವರಿಗೆ ಮಾತ್ರ ದೊರೆಯುವ ವಿಶೇಷ ಆಹ್ವಾನವೊಂದು ಯಲ್ಲಾಪುರದ ದಂಪತಿಗೆ ಲಭಿಸಿದ್ದು, ಇದೀಗ ಸ್ಥಳೀಯವಾಗಿ ಹೆಮ್ಮೆಯ ಸುದ್ದಿಯಾಗಿದೆ.

ರಾಜ್ಯಪಾಲರ ಕಾರ್ಯಾಲಯದ ವಿಶೇಷ ಆಹ್ವಾನದ ಮೇರೆಗೆ ಪ್ರಕಾಶ್ ಹೆಗಡೆ ಕೇರಿ ಹಾಗೂ ಅವರ ಪತ್ನಿ ದೀಪಾ ಹೆಗಡೆ ಅವರು ಶನಿವಾರ ಬೆಂಗಳೂರಿನ ಲೋಕ ಭವನದಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ವಿಶೇಷ ಸಮಾರಂಭದಲ್ಲಿ ಪಾಲ್ಗೊಂಡು ಆತಿಥ್ಯ ಸ್ವೀಕರಿಸಿದ್ದಾರೆ.

ಈ ಆಹ್ವಾನದ ವಿಶೇಷತೆ ಏನೆಂದರೆ, ಇದು ಕೇವಲ ಒಂದು ಕಾರ್ಯಕ್ರಮಕ್ಕೆ ನೀಡಿದ ಆಹ್ವಾನವಲ್ಲ. ಗ್ರಾಮೀಣ ಭಾಗದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ದೊರೆತ ಗೌರವ ಎಂಬುದು ಗಮನಾರ್ಹ.

ದೀಪಾ ಹೆಗಡೆ ಅವರು ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ವಿಶೇಷವಾಗಿ ಕೋವಿಡ್‌ನಂತಹ ಕಠಿಣ ಪರಿಸ್ಥಿತಿಯಲ್ಲೂ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಿದ್ದಾರೆ. ಸಾಮಾನ್ಯವಾಗಿ ಆರೋಗ್ಯ ಸೇವೆ ಎಂದರೆ ನಗರ ಅಥವಾ ಪಟ್ಟಣ ಪ್ರದೇಶಗಳಲ್ಲಿನ ಆಸ್ಪತ್ರೆಗಳು ನೆನಪಿಗೆ ಬರುತ್ತವೆ. ಆದರೆ ದೀಪಾ ಹೆಗಡೆ ಅವರ ಸೇವೆಯ ವಿಶೇಷತೆ ಇರುವುದು ದೂರದ ಗ್ರಾಮೀಣ ಪ್ರದೇಶದಲ್ಲಿ, ಅದರಲ್ಲೂ ಬುಡಕಟ್ಟು ಜನಾಂಗವೂ ವಾಸಿಸುವ ಹಳವಳ್ಳಿಯಂತಹ ಕುಗ್ರಾಮದಲ್ಲಿ ಆರೋಗ್ಯ ಸೇವೆ ಸಲ್ಲಿಸಿರುವುದರಲ್ಲಿ.

ಕೋವಿಡ್‌ ಸಂಕಷ್ಟದ ದಿನಗಳಲ್ಲಿ ಭಯ ಮತ್ತು ಆತಂಕದ ವಾತಾವರಣವಿದ್ದಾಗಲೂ ಆರೋಗ್ಯ ಇಲಾಖೆಯ ಸಿಬ್ಬಂದಿಯಾಗಿ ಗ್ರಾಮೀಣ ಜನರ ನಡುವೆ ಕೆಲಸ ಮಾಡುವುದು ಸುಲಭದ ಕೆಲಸವಾಗಿರಲಿಲ್ಲ.

ಅದರ ಜೊತೆಗೆ ನೆರೆಯಂತಹ ತುರ್ತು ಪರಿಸ್ಥಿತಿಗಳಲ್ಲೂ ಜನರ ಆರೋಗ್ಯದ ವಿಚಾರದಲ್ಲಿ ಶ್ರದ್ಧೆಯಿಂದ ಸೇವೆ ಸಲ್ಲಿಸಿರುವುದು ಅವರ ಕರ್ತವ್ಯನಿಷ್ಠೆಗೆ ಸಾಕ್ಷಿಯಾಗಿದೆ. ಗ್ರಾಮೀಣ ಭಾಗದ ಜನರೊಂದಿಗೆ ನೇರ ಸಂಪರ್ಕದಲ್ಲಿದ್ದು ಆರೋಗ್ಯ ಸೇವೆ ನೀಡಿದ ಪರಿಣಾಮ ಸ್ಥಳೀಯರ ಪ್ರೀತಿ ಮತ್ತು ವಿಶ್ವಾಸವನ್ನೂ ಅವರು ಗಳಿಸಿದ್ದಾರೆ.

ಈ ಸೇವೆಯೇ ಇದೀಗ ರಾಜ್ಯಪಾಲರ ವಿಶೇಷ ಗಮನ ಸೆಳೆದಿರುವುದು ಈ ಆಹ್ವಾನದ ಪ್ರಮುಖ ಅಂಶವಾಗಿದೆ. ಸ್ವಾತಂತ್ರ್ಯೋತ್ಸವದಂತಹ ಮಹತ್ವದ ದಿನದಂದು ರಾಜ್ಯಪಾಲರ ಕಾರ್ಯಾಲಯದಿಂದ ವಿಶೇಷ ಆಹ್ವಾನ ಪಡೆದು, ರಾಜ್ಯದ ಗಣ್ಯರೊಂದಿಗೆ ಒಂದೇ ವೇದಿಕೆಯಲ್ಲಿ ಆತಿಥ್ಯ ಸ್ವೀಕರಿಸುವ ಅವಕಾಶ ದೀಪಾ ಹೆಗಡೆ ಅವರಿಗೆ ದೊರೆತಿರುವುದು ಯಲ್ಲಾಪುರದ ಪಾಲಿಗೆ ಗಮನಾರ್ಹ ಸಂಗತಿಯಾಗಿದೆ.

ಪತ್ನಿಗೆ ದೊರೆತ ಈ ಗೌರವದ ಜತೆಗೆ ಪ್ರಕಾಶ್ ಹೆಗಡೆ ಕೇರಿ ಅವರಿಗೂ ಈ ಕಾರ್ಯಕ್ರಮ ಮತ್ತೊಂದು ವಿಶೇಷ ಸಂದರ್ಭವಾಯಿತು. ಕಾರ್ಯಕ್ರಮದ ಸಂದರ್ಭದಲ್ಲಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಉತ್ತರ ಕನ್ನಡದ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತು ಚರ್ಚಿಸಿದರು. ಇತ್ತೀಚೆಗೆ ಗುಟ್ಕಾ ಹಾಗೂ ಪಾನ್‌ ಮಸಾಲಾ ಕುರಿತ ಸರ್ಕಾರದ ಕ್ರಮಗಳಿಂದ ಅಡಿಕೆ ಬೆಳೆಗಾರರಲ್ಲಿ ಮೂಡಿದ್ದ ಆತಂಕದ ಹಿನ್ನೆಲೆಯಲ್ಲಿ ರೈತರ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಸರ್ಕಾರ ಕೈಗೊಂಡಿರುವ ಕ್ರಮಕ್ಕೆ ಧನ್ಯವಾದವನ್ನೂ ಸಲ್ಲಿಸಿದರು.

ದೀಪಾ ಹೆಗಡೆ ಅವರ ಗ್ರಾಮೀಣ ಆರೋಗ್ಯ ಸೇವೆ, ಪ್ರಕಾಶ್ ಹೆಗಡೆ ಕೇರಿ ಅವರ ರೈತರ ಪರವಾದ ಕಾಳಜಿ ಇವೆರಡೂ ಸೇರಿ ಈ ದಂಪತಿಗೆ ರಾಜ್ಯಪಾಲರ ಕಾರ್ಯಾಲಯದಿಂದ ವಿಶೇಷ ಆಹ್ವಾನ ದೊರೆಯಲು ಕಾರಣವಾದ ಹಿನ್ನೆಲೆಯನ್ನು ಮತ್ತಷ್ಟು ಅರ್ಥಪೂರ್ಣವಾಗಿಸುತ್ತವೆ.

ಸ್ವಾತಂತ್ರ್ಯೋತ್ಸವದ ದಿನ ರಾಜ್ಯದ ರಾಜಭವನದ ವಿಶೇಷ ಆತಿಥ್ಯ ಸ್ವೀಕರಿಸಿದ ಈ ದಂಪತಿಯ ಪಾಲಿಗೆ ಇದು ಕೇವಲ ಒಂದು ದಿನದ ಸಂಭ್ರಮವಲ್ಲ, ತಮ್ಮ ಸೇವೆಗೆ ದೊರೆತ ಅಪರೂಪದ ಗೌರವದ ನೆನಪಾಗಿ ಉಳಿಯುವ ದಿನವೂ ಹೌದು.

— ಕೆನರಾ ನೆಕ್ಸ್ಟ್‌ ನ್ಯೂಸ್‌ ಡೆಸ್ಕ್

(ಪೂರಕ ಮಾಹಿತಿ: ಪ್ರಮೋದ್‌ ಹೆಬ್ಬಾರ್‌ ಕಳಚೆ)

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share