ಅಕ್ರಮ ನಾಡಬಾಂಬ್ ಜಾಲ ಬಯಲು, ಮೂವರ ಬಂಧನ
ಕಾರವಾರ: ತುಮಕೂರು ಹೆದ್ದಾರಿಯಲ್ಲಿ ಕಾರಿನೊಳಗೆ ನಾಡಬಾಂಬ್ ಸ್ಫೋಟಗೊಂಡು ಅಂಕೋಲಾ ತಾಲೂಕಿನ ನಾಗೇಂದ್ರ ಗೌಡ ಮೃತಪಟ್ಟ ಪ್ರಕರಣದ ತನಿಖೆಯಲ್ಲಿ ಮಹತ್ವದ ತಿರುವು ಸಿಕ್ಕಿದೆ. ಪ್ರಕರಣದ ಬೆನ್ನಲ್ಲೇ ಅಕ್ರಮವಾಗಿ ಕಚ್ಚಾ ನಾಡಬಾಂಬ್ಗಳನ್ನು ದಾಸ್ತಾನು ಮಾಡಿಟ್ಟಿದ್ದ ಮೂವರು ಆರೋಪಿಗಳನ್ನು ಅಂಕೋಲಾ ಪೊಲೀಸರು ಬಂಧಿಸಿದ್ದು, ಸ್ಫೋಟಕ ವಸ್ತುಗಳ ಜಾಲದ ಸುಳಿವು ಪತ್ತೆಯಾಗಿದೆ.
ಜೂನ್ 30ರಂದು ಅಂಕೋಲಾ ಪೊಲೀಸ್ ಠಾಣೆಯ ಪಿಐ ಚಂದ್ರಶೇಖರ ಮಠಪತಿ ನೇತೃತ್ವದ ತಂಡ ಗಸ್ತಿನಲ್ಲಿದ್ದ ವೇಳೆ, ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ನಾರಾಯಣಗೌಡ ಹಾಗೂ ನಾಗರಾಜ್ ಗೌಡ ಅಕ್ರಮವಾಗಿ ಕಚ್ಚಾ ನಾಡಬಾಂಬ್ಗಳನ್ನು ಸಂಗ್ರಹಿಸಿಟ್ಟಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತು. ತಕ್ಷಣವೇ ಆ್ಯಂಟಿ ಸಬೋಟಾಜ್ ಚೆಕ್ (ASC) ಹಾಗೂ ಬಾಂಬ್ ಡಿಟೆಕ್ಷನ್ ಅಂಡ್ ಡಿಸ್ಪೋಸಲ್ ಸ್ಕ್ವಾಡ್ (BDDS) ತಂಡಗಳನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಲಾಯಿತು.
ವಿಚಾರಣೆ ವೇಳೆ ನಾರಾಯಣಗೌಡ ಮತ್ತು ನಾಗರಾಜ್ ಗೌಡ, ಮೀನು ಹಿಡಿಯಲು ನಾಡಬಾಂಬ್ಗಳನ್ನು ಇಟ್ಟುಕೊಂಡಿದ್ದಾಗಿ ಒಪ್ಪಿಕೊಂಡಿದ್ದಾರೆ. ತುಮಕೂರಿನಲ್ಲಿ ತಮ್ಮ ಸಂಬಂಧಿಕ ನಾಗೇಂದ್ರ ಗೌಡ ಸ್ಫೋಟದಲ್ಲಿ ಮೃತಪಟ್ಟ ಸುದ್ದಿ ತಿಳಿದ ಬಳಿಕ, ತಮ್ಮ ಬಳಿಯಿದ್ದ ನಾಡಬಾಂಬ್ಗಳನ್ನು ಅರಣ್ಯ ಪ್ರದೇಶದಲ್ಲಿ ಅಡಗಿಸಿಟ್ಟಿದ್ದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆರೋಪಿಗಳ ಮಾಹಿತಿ ಮೇರೆಗೆ ಅರಣ್ಯ ಪ್ರದೇಶದಿಂದ ಮೂರು ಕಚ್ಚಾ ನಾಡಬಾಂಬ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸುರಕ್ಷತಾ ಕ್ರಮವಾಗಿ ಅವುಗಳನ್ನು ಸ್ಫೋಟಕ ವಸ್ತುಗಳ ಸಂಗ್ರಹ ಘಟಕಕ್ಕೆ ರವಾನಿಸಲಾಗಿದೆ.
ತನಿಖೆಯಲ್ಲಿ ಈ ನಾಡಬಾಂಬ್ಗಳನ್ನು ಶಿರಗುಂಜಿಯ ಸಂದೀಪ್ ಗೌಡ ನೀಡಿದ್ದಾನೆ ಎಂಬ ಮಾಹಿತಿ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ನಾರಾಯಣಗೌಡ, ನಾಗರಾಜ್ ಗೌಡ (ಇಬ್ಬರೂ ಹೊನ್ನಳ್ಳಿ ನಿವಾಸಿಗಳು) ಹಾಗೂ ಸಂದೀಪ್ ಗೌಡ (ಶಿರಗುಂಜಿ) ಈ ಮೂವರನ್ನು ಬಂಧಿಸಲಾಗಿದೆ.
ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಫೋಟಕ ವಸ್ತುಗಳ ಮೂಲ, ತಯಾರಿಕೆ ಮತ್ತು ಪೂರೈಕೆ ಜಾಲದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.