ಮೈಸೂರು : ಪಿರಿಯಾಪಟ್ಟಣ ತಾಲೂಕಿನ ಸೂಳೆಕೋಟೆ (ಹನುಮಂತಪುರ) ಗ್ರಾಮದಲ್ಲಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಹಾಗೂ ಗ್ರಾಮಸ್ಥರ ಸಹಕಾರದಲ್ಲಿ ಶ್ರೀ ಸೀತಾರಾಮ ಸಮೇತ ಆಂಜನೇಯ ಸ್ವಾಮಿಯ ವಾರ್ಷಿಕ ಬ್ರಹ್ಮರಥೋತ್ಸವವು ಶನಿವಾರ ಅದ್ದೂರಿಯಾಗಿ ನೆರವೇರಿತು.
ಬೆಳಿಗ್ಗೆ 6.30ಕ್ಕೆ ಕಾವೇರಿ ನದಿಯಿಂದ ತೀರ್ಥ ಮತ್ತು ಮೃತಿಕೆ ಸಂಗ್ರಹಣೆ ನೆರವೇರಿಸಿ, ಹೊಸದಾಗಿ ನಿರ್ಮಿಸಿದ ತೇರಿನ ಕಳಸ ಪ್ರತಿಷ್ಠಾಪನೆ ಪೂಜೆ ನಡೆಯಿತು. ಬಳಿಕ ಬೆಳಿಗ್ಗೆ 11.45ಕ್ಕೆ ಸೀತಾರಾಮ ಸಮೇತ ಆಂಜನೇಯ ಸ್ವಾಮಿಯ ರಥಾರೋಹಣ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಭಕ್ತರ ಘೋಷಣೆಗಳ ನಡುವೆ ಬ್ರಹ್ಮರಥವನ್ನು ಭಕ್ತಾಧಿಗಳು ಭಕ್ತಿಭಾವದಿಂದ ಎಳೆದರು.ರಥೋತ್ಸವದ ವೇಳೆ ನೂರಾರು ಭಕ್ತರು ರಥಕ್ಕೆ ಹಣ್ಣು-ಜವನ ಎಸೆದು ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದರು. ಹಲವರು ರಥದ ಹಗ್ಗ ಹಿಡಿದು ರಥ ಎಳೆಯುವ ಮೂಲಕ ಪುಣ್ಯ ಸಂಪಾದಿಸಿದರು. ಇನ್ನು ಅನೇಕರು ರಥೋತ್ಸವವನ್ನು ಕಣ್ತುಂಬಿಕೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.
ಯುಗಾದಿ ಹಬ್ಬದ ಎರಡನೇ ದಿನ ನಡೆಯುವ ಈ ಜಾತ್ರೆಗೆ ಸುತ್ತಮುತ್ತಲಿನ ಜಿಲ್ಲೆಗಳು ಹಾಗೂ ತಾಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ಸಂಜೆವರೆಗೆ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡರು.ರಥೋತ್ಸವಕ್ಕೆ ಆಗಮಿಸಿದ ಎಲ್ಲಾ ಭಕ್ತರಿಗೆ ದೇವಸ್ಥಾನ ಸಮಿತಿಯಿಂದ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಬೆಟ್ಟದಪುರ ಶ್ರೀ ಸಲಿಲಾಖ್ಯ ಕನ್ನಡ ಮಠದ ಶ್ರೀ ಚಿಕ್ಕವೀರದೇಶೀಕೇಂದ್ರ ಸ್ವಾಮಿಗಳು, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ನಿತಿನ್ ವೆಂಕಟೇಶ್, ದೇವಸ್ಥಾನ ಸಮಿತಿಯ ಅಧ್ಯಕ್ಷ ಎಚ್. ಶಿಂಗ್ರಿಶೆಟ್ಟಿ, ಕಾರ್ಯದರ್ಶಿ ಕೆ. ಶಿವರಾಮ್, ಕಾರ್ಯಧ್ಯಕ್ಷ ಎಸ್.ಎಸ್. ಶಂಕರಪ್ಪ, ತಾ.ಪಂ ಮಾಜಿ ಸದಸ್ಯ ಮೋಹನ್ ರಾಜ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಸಾವಿರಾರು ಭಕ್ತರು ಉಪಸ್ಥಿತರಿದ್ದರು.