ಧಾರವಾಡ: ಪೆಟ್ರೋಲ್ ಅಭಾವದ ವದಂತಿಗಳ ಹಿನ್ನೆಲೆ ಮನೆಯಲ್ಲಿ ಇಂಧನ ಸಂಗ್ರಹಿಸುವ ಪ್ರವೃತ್ತಿ ಹೆಚ್ಚುತ್ತಿರುವ ನಡುವೆಯೇ, ಇದರಿಂದ ಸಂಭವಿಸಬಹುದಾದ ಅಪಾಯಕ್ಕೆ ಧಾರವಾಡದಲ್ಲಿ ನಡೆದ ದುರ್ಘಟನೆ ಸಾಕ್ಷಿಯಾಗಿದೆ.
ಜಿಲ್ಲೆಯ ತಡಕೋಡ ಗ್ರಾಮದಲ್ಲಿ ಸೋಮವಾರ ರಾತ್ರಿ ಪೆಟ್ರೋಲ್ ಕ್ಯಾನ್ ಸ್ಫೋಟಗೊಂಡು ಗೃಹಿಣಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಹರಿಜನಕೇರಿ ಓಣಿಯ ನಿವಾಸಿಯಾದ ಪೂರ್ಣಿಮಾ ಕಲ್ಲಪ್ಪ ಹಾದಿಮನಿ (32) ಅವರ ದೇಹದ ಸುಮಾರು ಶೇ. 80 ಭಾಗ ಸುಟ್ಟಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.
ಮದುವೆ ಕಾರ್ಯಕ್ರಮಗಳಲ್ಲಿ ರಥ ಓಡಿಸಲು ಬಳಸುವ ಉದ್ದೇಶದಿಂದ ಕುಟುಂಬವು ಪೆಟ್ರೋಲ್ ಸಂಗ್ರಹಿಸಿ ಫ್ರಿಡ್ಜ್ ಬಳಿ ಇಟ್ಟಿತ್ತು. ಪೂರ್ಣಿಮಾ ಅವರು ಅಡುಗೆ ಕೆಲಸದಲ್ಲಿದ್ದಾಗ ಆಕಸ್ಮಿಕವಾಗಿ ಕ್ಯಾನ್ಗೆ ಬೆಂಕಿ ತಗುಲಿ, ಕ್ಷಣಾರ್ಧದಲ್ಲಿ ಮನೆಗೆ ಬೆಂಕಿ ವ್ಯಾಪಿಸಿದೆ.
ಬೆಂಕಿಯ ಮಧ್ಯೆ ಸಿಲುಕಿದ್ದ ಪೂರ್ಣಿಮಾ ಅವರನ್ನು ರಕ್ಷಿಸಲು ಮುಂದಾದ ಮೈದುನ ಯಲ್ಲಪ್ಪ ಅವರು ಕೂಡ ಗಾಯಗೊಂಡಿದ್ದಾರೆ. ಇತರ ಕುಟುಂಬ ಸದಸ್ಯರು ಹೊರಗಡೆ ಇದ್ದುದರಿಂದ ಅಪಾಯದಿಂದ ಪಾರಾಗಿದ್ದಾರೆ.
ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಗರಗ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪ್ರಕರಣವನ್ನು ಪರಿಶೀಲಿಸಿದ್ದಾರೆ.
ಈ ಘಟನೆ ವದಂತಿಗಳ ಆಧಾರದಲ್ಲಿ ಅಕ್ರಮ, ಅಸುರಕ್ಷಿತವಾಗಿ ಇಂಧನ ಸಂಗ್ರಹಿಸುವುದು ಎಷ್ಟು ಅಪಾಯಕಾರಿ ಎಂಬುದನ್ನು ಮತ್ತೊಮ್ಮೆ ಎಚ್ಚರಿಸುತ್ತದೆ.