ಕಾರವಾರ: ಅರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವಂತೆ ಹಾಗೂ ಮತದಾರರ ಪಟ್ಟಿ ಸಂಪೂರ್ಣ ಪಾರದರ್ಶಕವಾಗಿರುವಂತೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿರುವ ತಂಡಗಳು ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಕಾರವಾರ-ಅಂಕೋಲಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಕರೆ ನೀಡಿದರು.
ಕಾರವಾರ ಗ್ರಾಮೀಣ ಬಿಜೆಪಿ ವತಿಯಿಂದ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಮಾಜಾಳಿಯ ವಿಶ್ವಕರ್ಮ ಸಭಾಭವನ ಹಾಗೂ ಚಿತ್ತಾಕುಲದ ಪುರುಷೋತ್ತಮ ಸಭಾಭವನದಲ್ಲಿ ಆಯೋಜಿಸಿದ್ದ ವಿಶೇಷ ಸಭೆಗಳಲ್ಲಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದ ಬುನಾದಿಯಾಗಿರುವ ಮತದಾರರ ಪಟ್ಟಿಯ ಶುದ್ಧತೆ ಮತ್ತು ಪಾರದರ್ಶಕತೆ ಅತ್ಯಂತ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಬಿಎಲ್ಎ-2, ಬೂತ್ ಅಧ್ಯಕ್ಷರು, ಮಹಿಳಾ ಪ್ರಮುಖರು ಹಾಗೂ ವಿವಿಧ ತಂಡಗಳ ಸದಸ್ಯರು ತಮಗೆ ವಹಿಸಲಾದ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಯಾವುದೇ ಅರ್ಹ ಮತದಾರ ಮತದಾರರ ಪಟ್ಟಿಯಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯ ಎಂದು ಅವರು ಹೇಳಿದರು.
ಮಾಜಾಳಿಯಲ್ಲಿ ನಡೆದ ಸಭೆಯಲ್ಲಿ ಗ್ರಾಮೀಣ ಮಂಡಲ ಅಧ್ಯಕ್ಷ ಸುಭಾಷ್ ಗುನಗಿ, ಬಿಎಲ್ಎ-1 ರಾಘು ಭಟ್, ಮಂಡಲ ಪ್ರಧಾನ ಕಾರ್ಯದರ್ಶಿ ಸೂರಜ್ ದೇಸಾಯಿ, ರಾಜೇಶ್ ಹೊಸಳ್ಳಿಕರ್ ಉಪಸ್ಥಿತರಿದ್ದರು.
ಚಿತ್ತಾಕುಲದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಸಂಜಯ್ ಸಾಳಂಕೆ, ಮಂಡಲ ಅಧ್ಯಕ್ಷ ಸುಭಾಷ್ ಗುನಗಿ, ಮಂಡಲ ಪ್ರಧಾನ ಕಾರ್ಯದರ್ಶಿ ಸೂರಜ್ ದೇಸಾಯಿ, ಬಿಎಲ್ಎ-1 ರಾಘು ಭಟ್, ಮಾರುತಿ ರಾಣಿ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ದೀಪಕ್ ದೇಸಾಯಿ ಸೇರಿದಂತೆ ಶಕ್ತಿ ಕೇಂದ್ರ ಪ್ರಮುಖರು, ಬಿಎಲ್ಎ-2 ಸದಸ್ಯರು ಹಾಗೂ ಬೂತ್ ಟೋಲಿ ಸದಸ್ಯರು ಪಾಲ್ಗೊಂಡಿದ್ದರು.