ಒಂದು ರಾಷ್ಟ್ರದ ಭವಿಷ್ಯವನ್ನು ರೂಪಿಸುವ ಶಕ್ತಿ ಶಿಕ್ಷಕರ ವೃತ್ತಿಯಲ್ಲಿದೆ. ವೈದ್ಯರು ಜೀವವನ್ನು ಉಳಿಸುತ್ತಾರೆ, ಇಂಜಿನಿಯರ್ಗಳು ಕಟ್ಟಡಗಳನ್ನು ನಿರ್ಮಿಸುತ್ತಾರೆ, ನ್ಯಾಯಾಧೀಶರು ನ್ಯಾಯವನ್ನು ನೀಡುತ್ತಾರೆ. ಆದರೆ ಇವರನ್ನೆಲ್ಲ ರೂಪಿಸುವ ಮಹಾನ್ ಶಿಲ್ಪಿ ಶಿಕ್ಷಕ.
ಆದರೆ ಇಂದಿನ ಸರ್ಕಾರಿ ಶಾಲೆಗಳ ವಾಸ್ತವ ಚಿತ್ರಣ ನೋಡಿದರೆ ಮನಸ್ಸು ಮರುಗುತ್ತದೆ. ಶಿಕ್ಷಕರ ಕೈಯಲ್ಲಿ ಪುಸ್ತಕಗಳಿಗಿಂತ ಕಡತಗಳೇ ಹೆಚ್ಚಾಗಿವೆ. ಚಾಕ್ ಮತ್ತು ಡಸ್ಟರ್ಗಿಂತ ಮೊಟ್ಟೆಯ ಟ್ರೇ, ಬಾಳೆಹಣ್ಣಿನ ಗೊಂಚಲು, ತರಕಾರಿಗಳ ಚೀಲ, ರಿಜಿಸ್ಟರ್ಗಳು, ಮೊಬೈಲ್ ಆ್ಯಪ್ಗಳು ಮತ್ತು ಆನ್ಲೈನ್ ಪೋರ್ಟಲ್ಗಳ ಹೊರೆ ಹೆಚ್ಚಾಗಿದೆ.
ಸರ್ಕಾರಿ ಶಾಲೆಯ ಶಿಕ್ಷಕರ ದಿನ ಪಾಠದಿಂದ ಆರಂಭವಾಗುವುದಿಲ್ಲ. ಮಧ್ಯಾಹ್ನದ ಬಿಸಿಯೂಟಕ್ಕೆ ಬೇಕಾದ ಸಾಮಗ್ರಿಗಳು ಸರಿಯಾಗಿ ಬಂದಿವೆಯೇ, ಮೊಟ್ಟೆಗಳು ಒಡೆದಿವೆಯೇ, ಬಾಳೆಹಣ್ಣುಗಳು ಹಣ್ಣಾಗಿವೆಯೇ, ಇವುಗಳ ಲೆಕ್ಕಪತ್ರ ಸರಿಯಾಗಿದೆಯೇ ಎಂಬ ಚಿಂತೆಯಲ್ಲಿಯೇ ದಿನ ಆರಂಭವಾಗುತ್ತದೆ. ನಂತರ ವಿದ್ಯಾರ್ಥಿಗಳ ಹಾಜರಾತಿ, ವಿವಿಧ ಇಲಾಖೆಗಳ ವರದಿಗಳು, ಪೋರ್ಟಲ್ಗಳಲ್ಲಿ ಮಾಹಿತಿ ದಾಖಲಿಸುವ ಕೆಲಸಗಳು ಒಂದರ ಹಿಂದೆ ಒಂದಾಗಿ ಸೇರುತ್ತವೆ.
ಇಷ್ಟಕ್ಕೇ ಮುಗಿಯುವುದಿಲ್ಲ. ಜನಗಣತಿ, ಮತದಾರರ ಪಟ್ಟಿ ಪರಿಷ್ಕರಣೆ, ಚುನಾವಣೆ ಕರ್ತವ್ಯ, ಸರ್ಕಾರಿ ಸಮೀಕ್ಷೆಗಳು, ಆರೋಗ್ಯ ಅಭಿಯಾನಗಳು ಹಾಗೂ ವಿವಿಧ ಯೋಜನೆಗಳ ಮಾಹಿತಿ ಸಂಗ್ರಹಣೆ… ಹೀಗೆ ಅನೇಕ ಶಿಕ್ಷಣೇತರ ಜವಾಬ್ದಾರಿಗಳೂ ಶಿಕ್ಷಕರ ಹೆಗಲ ಮೇಲೆಯೇ ಬೀಳುತ್ತಿವೆ. ಪರಿಣಾಮವಾಗಿ, ತರಗತಿಯಲ್ಲಿ ಇರಬೇಕಾದ ಶಿಕ್ಷಕರು ಕಚೇರಿಗಳ ಕೆಲಸಗಳಲ್ಲಿ ನಿರತರಾಗುತ್ತಾರೆ.
ವಾಸ್ತವವಾಗಿ ಒಬ್ಬ ಶಿಕ್ಷಕ ಪಾಠದ ತಯಾರಿ ಮಾಡಬೇಕು, ಪ್ರತಿ ವಿದ್ಯಾರ್ಥಿಯ ಕಲಿಕಾ ಸಾಮರ್ಥ್ಯವನ್ನು ಗುರುತಿಸಬೇಕು, ಹಿಂದೆ ಉಳಿದ ಮಕ್ಕಳನ್ನು ಮುಂದೆ ತರಬೇಕು, ಹೊಸ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಮಕ್ಕಳಲ್ಲಿ ಸಂಸ್ಕಾರ, ಮಾನವೀಯತೆ, ವೈಜ್ಞಾನಿಕ ಮನೋಭಾವ, ದೇಶಪ್ರೇಮ ಮತ್ತು ಆತ್ಮವಿಶ್ವಾಸ ಬೆಳೆಸಬೇಕು. ಆದರೆ ಇಷ್ಟೊಂದು ಹೆಚ್ಚುವರಿ ಜವಾಬ್ದಾರಿಗಳ ನಡುವೆ ಅದಕ್ಕೆ ಬೇಕಾದಷ್ಟು ಸಮಯವೇ ದೊರೆಯುತ್ತಿಲ್ಲ.
ʻನಾವು ಶಿಕ್ಷಕರಾಗಿ ನೇಮಕವಾಗಿದ್ದೇವೆ. ಆದರೆ ಕೆಲಸಗಳ ಪಟ್ಟಿಯನ್ನು ನೋಡಿದರೆ ಡೇಟಾ ಎಂಟ್ರಿ ಆಪರೇಟರ್, ಲೆಕ್ಕಾಧಿಕಾರಿ, ಸರಬರಾಜುದಾರ, ಗಣತಿದಾರ, ಚುನಾವಣಾ ಸಿಬ್ಬಂದಿ, ಸಮೀಕ್ಷಾಧಿಕಾರಿ, ಆಹಾರ ವಿತರಣೆ ನಿರ್ವಾಹಕ ಎಲ್ಲವೂ ನಾವು ಆಗಿದ್ದೇವೆʼ ಇದು ಶಿಕ್ಷಕರ ಅಳಲು.
ಆನ್ಲೈನ್ ವ್ಯವಸ್ಥೆಗಳು ಶಿಕ್ಷಣವನ್ನು ಸುಲಭಗೊಳಿಸಬೇಕಿತ್ತು. ಆದರೆ ಹಲವೆಡೆ ಅವೇ ಶಿಕ್ಷಕರಿಗೆ ಹೆಚ್ಚುವರಿ ಹೊರೆ ಆಗಿವೆ. ಪೋರ್ಟಲ್ಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ರಾತ್ರಿ ತಡವರೆಗೂ ಮಾಹಿತಿ ನಮೂದಿಸಬೇಕಾಗುತ್ತದೆ. ಇಂಟರ್ನೆಟ್ ಸಮಸ್ಯೆ, ತಾಂತ್ರಿಕ ದೋಷಗಳು, ನಿರಂತರ ವರದಿಗಳ ಬೇಡಿಕೆ ಶಿಕ್ಷಕರ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತಿವೆ.
ಈ ಪರಿಸ್ಥಿತಿಯ ನೇರ ಪರಿಣಾಮ ವಿದ್ಯಾರ್ಥಿಗಳ ಮೇಲೆಯೇ ಬೀಳುತ್ತದೆ. ಶಿಕ್ಷಕರು ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ವೈಯಕ್ತಿಕ ಮಾರ್ಗದರ್ಶನ, ನಿಧಾನಗತಿಯ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ, ಪ್ರತಿಭಾವಂತ ಮಕ್ಕಳಿಗೆ ಉತ್ತೇಜನ ಹಾಗೂ ಸೃಜನಶೀಲ ಚಟುವಟಿಕೆಗಳು ಸಮಯದ ಕೊರತೆಯಿಂದ ಹಿನ್ನಡೆಯುತ್ತಿವೆ. ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಬೇಕಾದರೆ ಮೊದಲಿಗೆ ಶಿಕ್ಷಕರ ಸಮಯವನ್ನು ಉಳಿಸಬೇಕು.
ಆದ್ದರಿಂದ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಕೆಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಪ್ರತಿಯೊಂದು ಶಾಲೆಗೆ ಪ್ರತ್ಯೇಕ ಆಡಳಿತ ಸಿಬ್ಬಂದಿಯನ್ನು ನೇಮಿಸಬೇಕು. ಡೇಟಾ ಎಂಟ್ರಿ ಕೆಲಸಗಳಿಗೆ ವಿಶೇಷ ಸಿಬ್ಬಂದಿ ಇರಬೇಕು. ಮಧ್ಯಾಹ್ನದ ಬಿಸಿಯೂಟ ಹಾಗೂ ಪೌಷ್ಟಿಕ ಆಹಾರ ವಿತರಣೆಗೆ ಪ್ರತ್ಯೇಕ ವ್ಯವಸ್ಥೆ ರೂಪಿಸಬೇಕು. ಶಿಕ್ಷಣೇತರ ಕಾರ್ಯಗಳಲ್ಲಿ ಶಿಕ್ಷಕರನ್ನು ಬಳಸುವುದನ್ನು ಅತ್ಯಗತ್ಯ ಸಂದರ್ಭಗಳಿಗೆ ಮಾತ್ರ ಸೀಮಿತಗೊಳಿಸಿ, ಅವರ ಸಂಪೂರ್ಣ ಸಮಯವನ್ನು ಬೋಧನೆ ಮತ್ತು ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕೆ ಮೀಸಲಿಡಬೇಕು.
ಒಬ್ಬ ಉತ್ತಮ ಶಿಕ್ಷಕ ಸಾವಿರಾರು ವಿದ್ಯಾರ್ಥಿಗಳ ಬದುಕನ್ನು ಬದಲಾಯಿಸಬಲ್ಲ. ಆದರೆ ಒಬ್ಬ ಶಿಕ್ಷಕನನ್ನು ಅನಗತ್ಯ ಕೆಲಸಗಳಲ್ಲಿ ಮುಳುಗಿಸಿದರೆ, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೂ ಅನ್ಯಾಯ ಮಾಡಿದಂತಾಗುತ್ತದೆ.
– ಶ್ರೀಕಾಂತ್ ವೆಂಕಟೇಶ್ ನಾಯ್ಕ್.