ಜೋಯಿಡಾ: ಗೋವಾದ ಬಾಂಬೋಲಿಮ್ನಲ್ಲಿ ಕೇರ್ಟೇಕರ್ ಕೆಲಸ ಮಾಡುತ್ತಿದ್ದ ಜೋಯಿಡಾ ತಾಲೂಕಿನ ಜಗಲಬೇಟ ಗ್ರಾಮದ ವ್ಯಕ್ತಿಯೊಬ್ಬರು ಗೋವಾಕ್ಕೆ ತೆರಳುವ ಮಾರ್ಗದಲ್ಲಿ ನಾಪತ್ತೆಯಾಗಿರುವ ಕುರಿತು ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಗಲಬೇಟ ಗ್ರಾಮದ ನಿವಾಸಿ ಮಾಬುಲ್ಳಿ ದಾವಲಸಾಬ ಕುನ್ನೂರೆ (39) ನಾಪತ್ತೆಯಾದವರು. ಅವರು ಕಳೆದ ಒಂದು ವರ್ಷದಿಂದ ಗೋವಾದ ಬಾಂಬೋಲಿಮ್ನಲ್ಲಿ ಕೇರ್ಟೇಕರ್ ಹಾಗೂ ಕೂಲಿ ಕೆಲಸ ಮಾಡಿಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸೆಪ್ಟೆಂಬರ್ 1ರಂದು ಗೋವಾದಿಂದ ಜಗಲಬೇಟದಲ್ಲಿರುವ ಮನೆಗೆ ಬಂದಿದ್ದ ದಾವಲಸಾಬ ಅವರು ಎರಡು ದಿನ ಮನೆಯಲ್ಲಿದ್ದು, ಸೆಪ್ಟೆಂಬರ್ 3ರಂದು ಮತ್ತೆ ಕೆಲಸಕ್ಕೆ ಗೋವಾಕ್ಕೆ ಹೊರಟಿದ್ದರು. ಬೆಳಿಗ್ಗೆ ಸುಮಾರು 10 ಗಂಟೆಗೆ ಪತ್ನಿ ರುಬಿನಾ ಅವರು ಸ್ಕೂಟರ್ನಲ್ಲಿ ಅವರನ್ನು ಜಗಲಬೇಟದಿಂದ ರಾಮನಗರಕ್ಕೆ ಕರೆದುಕೊಂಡು ಬಂದಿದ್ದು, ಸುಮಾರು 10.30ಕ್ಕೆ ದಾಂಡೇಲಿ ರಸ್ತೆಯಲ್ಲಿರುವ ಬೇಕರಿಯೊಂದರ ಮುಂದೆ ಬಿಟ್ಟು ಮನೆಗೆ ವಾಪಸ್ ತೆರಳಿದ್ದರು.
ಬಳಿಕ ಪತ್ನಿ, ದಾವಲಸಾಬ ಅವರ ಮೊಬೈಲ್ಗೆ ವಾಟ್ಸ್ಆ್ಯಪ್ನಲ್ಲಿ ಧ್ವನಿ ಸಂದೇಶ ಕಳುಹಿಸಿ ಎಲ್ಲಿದ್ದಾರೆ ಎಂದು ವಿಚಾರಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅವರು ಬಸ್ನಲ್ಲಿ ಹೋಗುತ್ತಿಲ್ಲ, ಬದಲಾಗಿ ಟ್ರಕ್ನಲ್ಲಿ ಗೋವಾಕ್ಕೆ ತೆರಳುತ್ತಿರುವುದಾಗಿ ತಿಳಿಸಿದ್ದರು. ಅಲ್ಲದೆ, ತಮ್ಮ ಆಧಾರ್ ಕಾರ್ಡ್ ಕಳುಹಿಸುವಂತೆ ಕೇಳಿಕೊಂಡಿದ್ದರು. ಅದರಂತೆ ಪತ್ನಿ ಆಧಾರ್ ಕಾರ್ಡ್ ಕಳುಹಿಸಿದ್ದರು.
ಗೋವಾಕ್ಕೆ ತಲುಪಿದ ಬಳಿಕ ಕರೆ ಮಾಡುವುದಾಗಿ ದಾವಲಸಾಬ ತಿಳಿಸಿದ್ದರೂ ನಂತರ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಬಳಿಕ ಅವರು ಕೆಲಸ ಮಾಡುತ್ತಿದ್ದ ಗೋವಾದ ಸ್ಥಳ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ದೊರೆತಿಲ್ಲ ಎಂದು ಪತ್ನಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ದಾವಲಸಾಬ ಕುನ್ನೂರೆ ಅವರ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.