Friday, July 24, 2026
Join WhatsApp Group
HomeLocal Storyಭೂಮಿ ಜಾರಿ ಐದು ವರ್ಷ!

ಭೂಮಿ ಜಾರಿ ಐದು ವರ್ಷ!

ತಾಯ್ನೆಲ ಬಿಡಲಾರದ ಜನರ ಮೌನದ ಹೋರಾಟ

ಯಲ್ಲಾಪುರ: ಒಂದು ಊರು ಎಂದರೆ ಕೇವಲ ಮನೆಗಳ ಸಾಲಲ್ಲ. ಅಲ್ಲಿನ ಜನರ ನೆನಪುಗಳು, ತಲೆಮಾರುಗಳ ಬೆವರು, ಹೊಲದ ಮಣ್ಣಿನ ವಾಸನೆ, ದೇವರ ಗುಡಿ, ಬಾವಿ, ಹಳ್ಳ, ಮರ, ಕಲ್ಲು… ಇವೆಲ್ಲ ಸೇರಿ ಒಂದು ಊರಾಗುತ್ತದೆ. ಅದನ್ನು ಬಿಟ್ಟು ಹೋಗಿ ಎಂದು ಹೇಳುವುದು ಸುಲಭ. ಆದರೆ, ಅಲ್ಲಿಯೇ ಹುಟ್ಟಿ ಬೆಳೆದು, ಅದೇ ಮಣ್ಣಿನಲ್ಲಿ ತಂದೆ-ತಾಯಿಯನ್ನು ಮಣ್ಣಾಗಿಸಿ, ಅದೇ ಭೂಮಿಯನ್ನು ಬದುಕಿನ ಆಧಾರ ಮಾಡಿಕೊಂಡವರಿಗೆ ಊರು ಬಿಡಿ ಎನ್ನುವುದು ಜೀವ ಬಿಡಿ ಎನ್ನುವುದಕ್ಕೆ ಸಮಾನ!

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮ ಇಂದು ಅಂತಹ ನೋವಿನ ನಡುವೆಯೇ ಬದುಕು ನಡೆಸುತ್ತಿದೆ.

ಮಲೆನಾಡಿನ ಜನರಿಗೆ ಮಳೆ ಹೊಸದಲ್ಲ. ಆದರೆ, ಆ ದಿನ ಸುರಿದದ್ದು ಮಳೆಯಲ್ಲ, ಪ್ರಕೃತಿಯ ಕೋಪ. 2021ರ ಜುಲೈ 21ರ ಆ ಕರಾಳ ರಾತ್ರಿ ಇಡೀ ಕಳಚೆಯ ಚಿತ್ರಣವನ್ನೇ ಬದಲಾಯಿಸಿಬಿಟ್ಟಿತ್ತು. ಕೆಲವೇ ಗಂಟೆಗಳಲ್ಲಿ ಸುರಿದ ದಾಖಲೆ ಮಳೆಯಿಂದ ಬೆಟ್ಟಗಳು ಅನಾಮತ್ತಾಗಿ ಜಾರಿದವು. ಗುಡ್ಡಗಳು ಬಾಯ್ದೆರೆದವು. ಹಸಿರು ಅಡಕೆ ತೋಟಗಳು ಕ್ಷಣಾರ್ಧದಲ್ಲಿ ಮಣ್ಣಿನಡಿ ಹೂತುಹೋದವು. ಹರಿವ ಹಳ್ಳಗಳು ಹೊಸ ದಾರಿ ಹುಡುಕಿದವು. ಸೇತುವೆಗಳು ಕೊಚ್ಚಿಹೋದವು. ಕಣ್ಣೆದುರೇ ಬದುಕು ಕುಸಿದು ಬಿದ್ದ ದೃಶ್ಯವನ್ನು ಕಂಡವರು ಇಂದಿಗೂ ಆ ರಾತ್ರಿಯನ್ನು ನೆನಪಿಸಿಕೊಳ್ಳಲು ಹೆದರುತ್ತಾರೆ.

ಆ ದುರಂತದ ಬಳಿಕ ಮುಖ್ಯಮಂತ್ರಿ ಬಂದರು. ಸಚಿವರು ಬಂದರು. ಅಧಿಕಾರಿಗಳು ಬಂದರು. ಜನಪ್ರತಿನಿಧಿಗಳು ಬಂದರು. ಕ್ಯಾಮೆರಾಗಳು ಬಂದವು. ಸಾಂತ್ವನದ ಮಾತುಗಳು ಕೇಳಿಬಂದವು. ಪುನರ್ವಸತಿಯ ಭರವಸೆಗಳೂ ಸಿಕ್ಕವು. ಆದರೆ, ಐದು ವರ್ಷಗಳ ನಂತರ ಕಳಚೆಗೆ ಹೋಗಿ ನೋಡಿದರೆ ಅಲ್ಲಿ ಇನ್ನೂ ಭರವಸೆಗಿಂತ ಭಯವೇ ಹೆಚ್ಚು ಕಾಣುತ್ತಿದೆ.

ಭೂಕುಸಿತದಲ್ಲಿ ಹಾನಿಗೊಳಗಾದ ಪ್ರದೇಶವನ್ನು ಭೂವಿಜ್ಞಾನಿಗಳು ಅಪಾಯ ವಲಯ ಎಂದು ಗುರುತಿಸಿದರು. ಮಳೆ ಬಂದರೆ ಮತ್ತೆ ಗುಡ್ಡ ಜಾರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು. ಅದರ ನಂತರ ಆಡಳಿತ ನೀಡಿದ ಪ್ರಮುಖ ಸಲಹೆ ” ಈ ಜಾಗ ಬಿಟ್ಟು ಬೇರೆಡೆ ಹೋಗಿ.”

ಪ್ರಶ್ನೆ ಆರಂಭವಾದ್ದೇ ಅಲ್ಲಿಂದ. ಹೋಗಿ ಎಂದರೆ ಎಲ್ಲಿಗೆ ಹೋಗಬೇಕು? ಯಾರು ಜಾಗ ಕೊಡುತ್ತಾರೆ? ಬೆಳೆ ಕಳೆದುಕೊಂಡ ರೈತ ಹೊಸ ಬದುಕನ್ನು ಎಲ್ಲಿ ಆರಂಭಿಸಬೇಕು? ಹಣವಿರುವವರು ಪಟ್ಟಣಕ್ಕೆ ಹೋಗಬಹುದು. ಆದರೆ, ಹೊಲವೇ ಆಸ್ತಿ, ಅಡಕೆಯೇ ಆದಾಯ, ಊರೇ ಬದುಕಾಗಿರುವ ರೈತ ಎಲ್ಲಿಗೆ ಹೋಗಬೇಕು?

ಕಳಚೆಯ ಅನೇಕ ಕುಟುಂಬಗಳು ಇಂದಿಗೂ ತಮ್ಮ ಮನೆಯ ಎದುರು ನಿಂತಿರುವ ಬೆಟ್ಟವನ್ನೇ ನೋಡುತ್ತ ಬದುಕುತ್ತಿವೆ. ಮಳೆ ಮೋಡ ಕವಿದರೆ ಮನಸ್ಸಿನಲ್ಲಿ ಆತಂಕ ಶುರುವಾಗುತ್ತದೆ. ರಾತ್ರಿ ಮಳೆ ಜೋರಾದರೆ ನಿದ್ರೆ ಬರುವುದಿಲ್ಲ. ಭೂಕುಸಿತದ ಸದ್ದು ಮತ್ತೆ ಕೇಳಿಬರುವುದೇ ಎಂಬ ಭಯ ಪ್ರತಿಯೊಂದು ಮಳೆಗಾಲದಲ್ಲೂ ಅವರನ್ನು ಕಾಡುತ್ತದೆ.

ಕೆಲವರು ಊರು ಬಿಟ್ಟು ಸಂಬಂಧಿಕರ ಮನೆ ಸೇರಿದ್ದಾರೆ. ಕೆಲವರು ಪಟ್ಟಣಗಳಿಗೆ ವಲಸೆ ಹೋಗಿದ್ದಾರೆ. ಆದರೆ, ಎಲ್ಲರೂ ಹೋಗಲಿಲ್ಲ. ಹೋಗಲಾಗಲಿಲ್ಲ. ಯಾಕೆಂದರೆ, ಮಣ್ಣಿನ ಜೊತೆಗಿನ ಸಂಬಂಧವನ್ನು ಸರ್ಕಾರದ ಆದೇಶದಿಂದ ಕತ್ತರಿಸಲು ಸಾಧ್ಯವಿಲ್ಲ.

ಕಳಚೆಯಂತಹ ಗ್ರಾಮಗಳಲ್ಲಿ ಬದುಕು ಎಂದರೆ ಕೇವಲ ಮನೆ ಅಲ್ಲ. ಅದು ಅಡಕೆ ತೋಟ. ಹಸು-ಕರುಗಳು. ಕಾಡಿನ ಅಂಚಿನ ಕೃಷಿ. ವರ್ಷಗಳ ಪರಿಶ್ರಮದಿಂದ ಬೆಳೆಸಿದ ಭೂಮಿ. ಒಂದೇ ಆದೇಶದಲ್ಲಿ ಅದನ್ನೆಲ್ಲ ಬಿಟ್ಟು ಹೋಗಿ ಎನ್ನುವುದು ವಾಸ್ತವಕ್ಕೆ ದೂರವಾದ ಮಾತು.

ಇನ್ನೊಂದು ನೋವಿನ ಸಂಗತಿ ಎಂದರೆ, ಭೂಕುಸಿತದ ಬಳಿಕ ಕೆಲವು ಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದರೂ, ದೀರ್ಘಕಾಲಿಕ ಪರಿಹಾರದ ಬಗ್ಗೆ ಸ್ಪಷ್ಟತೆ ಕಾಣಲಿಲ್ಲ. ವೈಜ್ಞಾನಿಕ ಅಧ್ಯಯನಗಳ ವರದಿಗಳು ಸಿದ್ಧವಾದವು. ಅಪಾಯದ ನಕ್ಷೆಗಳು ರಚನೆಯಾದವು. ಆದರೆ, ಆ ವರದಿಗಳ ಫಲ ಗ್ರಾಮಸ್ಥರ ಬದುಕಿಗೆ ಎಷ್ಟು ತಲುಪಿತು ಎಂಬ ಪ್ರಶ್ನೆ ಇಂದಿಗೂ ಉತ್ತರ ಕಾಣಬೇಕಿದೆ.

ಇಂದು ಕಳಚೆಯಲ್ಲಿ ಮನೆಗಳಿವೆ. ಜನರೂ ಇದ್ದಾರೆ. ಆದರೆ, ನೆಮ್ಮದಿ ಇಲ್ಲ. ಪ್ರತಿ ಮಳೆಗಾಲದಲ್ಲೂ ಅವರು ಹವಾಮಾನ ಇಲಾಖೆಯ ಮುನ್ಸೂಚನೆ ಕೇಳುತ್ತಾರೆ. ಮೊಬೈಲ್‌ನಲ್ಲಿ ಮಳೆಯ ಪ್ರಮಾಣ ನೋಡುತ್ತಾರೆ. ಗುಡ್ಡದ ಕಡೆ ಕಣ್ಣಿಡುತ್ತಾರೆ. ರಾತ್ರಿ ಮಕ್ಕಳನ್ನು ಹತ್ತಿರದಲ್ಲೇ ಮಲಗಿಸಿಕೊಳ್ಳುತ್ತಾರೆ. ಒಂದು ವಿಚಿತ್ರ ಅನಿಶ್ಚಿತತೆಯಲ್ಲೇ ಬದುಕುತ್ತಿದ್ದಾರೆ.

ಕಳಚೆಯ ಜನರು ಸರ್ಕಾರದಿಂದ ಐಷಾರಾಮಿ ಬದುಕನ್ನು ಕೇಳುತ್ತಿಲ್ಲ. ಬದುಕಲು ಭಯವಿಲ್ಲದ ಒಂದು ನೆಲೆಯನ್ನಷ್ಟೇ ಕೇಳುತ್ತಿದ್ದಾರೆ. ಆದರೆ, ಐದು ವರ್ಷಗಳ ನಂತರವೂ ಅವರ ಮನಸ್ಸಿನ ಕುಸಿತವನ್ನು ತೆರವುಗೊಳಿಸುವ ಕೆಲಸವನ್ನು ವ್ಯವಸ್ಥೆ ಇನ್ನೂ ಪೂರ್ಣಗೊಳಿಸಿಲ್ಲ.

ಅದಕ್ಕೇ ಕಳಚೆಯಲ್ಲಿ ಪ್ರತಿಯೊಂದು ಮಳೆಗಾಲವೂ ಕೇವಲ ಮಳೆಗಾಲವಲ್ಲ… ಮತ್ತೊಮ್ಮೆ ಬದುಕು ಜಾರಿಬೀಳುವ ಭಯದ ಕಾಲ….

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share