ಯಲ್ಲಾಪುರ: ಮನೆ ಸಮೀಪ ಅತಿಕ್ರಮಣ ಪ್ರವೇಶ ಮಾಡಿ ಬಂದ ಇಬ್ಬರು ವ್ಯಕ್ತಿಗಳು ಹಬ್ಬದ ದಿನ ನಡೆದ ಮಾತಿನ ವಿಚಾರವನ್ನು ಮುಂದಿಟ್ಟುಕೊಂಡು ಗಲಾಟೆ ನಡೆಸಿ, ಕತ್ತಿಯಿಂದ ತಂದೆ–ಮಗಳ ಮೇಲೆ ಹಲ್ಲೆ ನಡೆಸಿದ ಆರೋಪ ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮದಲ್ಲಿ ಕೇಳಿಬಂದಿದೆ. ಘಟನೆಯಲ್ಲಿ ಇಬ್ಬರಿಗೂ ಗಾಯವಾಗಿದ್ದು, ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳಚೆ ಗ್ರಾಮದ ಸುಣಜೋಗ ಕೇರಿ ನಿವಾಸಿ ಉಮಾಕಾಂತ ಬಾಬು ಕಳಸ (55) ಅವರು ನೀಡಿದ ದೂರಿನ ಆಧಾರದ ಮೇಲೆ ರಾಜೇಶ ಅನಂತ ಹೆಗಡೆ (30) ಹಾಗೂ ಅನಂತ ಸಾಂಬಾ ಹೆಗಡೆ (58) ವಿರುದ್ಧ ಪ್ರಕರಣ ದಾಖಲಾಗಿದೆ.
ಆ.26ರಂದು ಉಮಾಕಾಂತ ಅವರು ಮನೆಯಲ್ಲಿದ್ದಾಗ ಆರೋಪಿತರು ಅವರ ಮನೆ ಸಮೀಪಕ್ಕೆ ಬಂದಿದ್ದಾರೆ. ಈ ವೇಳೆ ನಾಗರಪಂಚಮಿ ಹಬ್ಬದ ದಿನ ನಡೆದಿದ್ದ ಮಾತಿನ ವಿಚಾರವನ್ನು ಮುಂದಿಟ್ಟುಕೊಂಡು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಉಮಾಕಾಂತ ಅವರು, ಹಬ್ಬದ ದಿನ ಮನೆಯ ಸಮೀಪ ತೋಟದಲ್ಲಿ ಪೂಜಾ ಸಾಮಗ್ರಿಗಳನ್ನು ಇಟ್ಟು ಪೂಜೆ ಮಾಡುತ್ತಿದ್ದಾಗ, ಆರೋಪಿಗಳ ಪೈಕಿ ಒಬ್ಬರು ಬೂಟು ಧರಿಸಿ ಬಂದಿದ್ದನ್ನು ನೋಡಿ ಬೂಟು ಬಿಚ್ಚಿ ಬರಬಹುದಿತ್ತು ಎಂದು ಹೇಳಿದ್ದರು.
ಅಂದು ಆಡಿದ ಮಾತಿಗೆ ಸಂಬಂಧಿಸಿ ಇಂದು ಗಲಾಟೆ ಆರಂಭವಾಗಿದ್ದು, ಆರೋಪಿಗಳ ಪೈಕಿ ರಾಜೇಶ ಅವಾಚ್ಯವಾಗಿ ನಿಂದಿಸಿ ಕತ್ತಿಯಿಂದ ಉಮಾಕಾಂತ ಅವರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಹಲ್ಲೆಯಿಂದ ತಪ್ಪಿಸಿಕೊಳ್ಳಲು ಉಮಾಕಾಂತ ಅವರು ಕತ್ತಿಯನ್ನು ಕೈಗಳಿಂದ ಹಿಡಿದಾಗ ಬಲಕೈಗೆ ಗಾಯವಾಗಿದೆ.
ನಂತರ ಮತ್ತೊಬ್ಬ ಆರೋಪಿ ಅನಂತ ಕತ್ತಿಯಿಂದ ಉಮಾಕಾಂತ ಅವರ ಎಡ ಭುಜಕ್ಕೆ ಹೊಡೆದಿದ್ದಾನೆ ಎನ್ನಲಾಗಿದೆ. ತಂದೆಯನ್ನು ರಕ್ಷಿಸಲು ಮಧ್ಯೆ ಬಂದ ಮಗಳು ಆಶಾ (26) ಅವರ ಕೈಬೆರಳುಗಳಿಗೂ ಗಾಯವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನಾ ಸ್ಥಳಕ್ಕೆ ಬಂದ ಕೆಲವರು ಗಲಾಟೆ ಬಿಡಿಸಲು ಮುಂದಾದಾಗ ಆರೋಪಿಗಳು ಉಮಾಕಾಂತ ಅವರಿಗೆ ಜೀವ ಬೆದರಿಕೆ ಹಾಕಿ ಅಲ್ಲಿಂದ ತೆರಳಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಗಾಯಗೊಂಡ ಉಮಾಕಾಂತ ಹಾಗೂ ಆಶಾ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಬಳಿಕ ಉಮಾಕಾಂತ ಅವರು ಯಲ್ಲಾಪುರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.
ಈ ಕುರಿತು ಪ್ರಕರಣ ದಾಖಲಾಗಿದ್ದು, ಪಿಎಸ್ಐ ಮಹಾವೀರ ಕಾಂಬಳೆ ಅವರ ನೇತೃತ್ವದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.