Monday, September 7, 2026
Join WhatsApp Group
HomeInformationಕೆಂಪು ಡಬ್ಬಿ ಪ್ರಯಾಣ; ನಿಮ್ಮ ಹಕ್ಕುಗಳು ನಿಮಗೆ ಗೊತ್ತಾ?

ಕೆಂಪು ಡಬ್ಬಿ ಪ್ರಯಾಣ; ನಿಮ್ಮ ಹಕ್ಕುಗಳು ನಿಮಗೆ ಗೊತ್ತಾ?

ಬಸ್ ಹತ್ತಿದ ಕೂಡಲೇ ಟಿಕೆಟ್ ತೆಗೆದುಕೊಳ್ಳುವುದು, ಸೀಟು ಸಿಕ್ಕರೆ ಕುಳಿತುಕೊಳ್ಳುವುದು, ಇಳಿಯುವ ಸ್ಟಾಪ್ ಬಂದಾಗ ಇಳಿಯುವುದು… ನಮ್ಮಲ್ಲಿ ಬಹುತೇಕರಿಗೆ ಕೆಎಸ್‌ಆರ್‌ಟಿಸಿ ಪ್ರಯಾಣ ಎಂದರೆ ಇಷ್ಟೇ! ಆದರೆ ಪ್ರಯಾಣಿಕನಾಗಿ ನಿಮಗೂ ಕೆಲವು ಹಕ್ಕುಗಳಿವೆ ಎಂಬುದು ಗೊತ್ತೇ? ಕೆಲವೊಮ್ಮೆ ಸಣ್ಣ ವಿಷಯವೆಂದು ಕಡೆಗಣಿಸುವ ಸಂಗತಿಗಳೇ ಸಮಸ್ಯೆಯಾದಾಗ ದೊಡ್ಡ ತಲೆನೋವಾಗುತ್ತವೆ. ಆಗ ‘ಇದು ನನ್ನ ಹಕ್ಕು’ ಎಂದು ಹೇಳಲು ಮಾಹಿತಿ ಇರಬೇಕು ಅಲ್ವಾ, ಅದಕ್ಕಾಗಿಯೇ ಈ ಇಂದಿನ Morning ಬೈಟ್ಸ್.

ಮೊದಲನೆಯದಾಗಿ, ಟಿಕೆಟ್ ನಿಮ್ಮ ಹಕ್ಕು ಮಾತ್ರವಲ್ಲ, ನಿಮ್ಮ ರಕ್ಷಣೆ ಕೂಡ ಹೌದು. ಕಂಡಕ್ಟರ್ ಎಷ್ಟು ಆತುರದಲ್ಲಿದ್ದರೂ ಟಿಕೆಟ್ ಕೊಡಲೇಬೇಕು. ಟಿಕೆಟ್ ಇಲ್ಲದೆ ಪ್ರಯಾಣಿಸಿದರೆ ತಪ್ಪು ನಿಮ್ಮ ಮೇಲೂ ಬರಬಹುದು. ಅಪಘಾತ ಸಂಭವಿಸಿದರೂ ನೀವು ಅಧಿಕೃತ ಪ್ರಯಾಣಿಕರೆಂದು ಸಾಬೀತುಪಡಿಸಲು ಟಿಕೆಟ್ ಹೊರತಾಗಿ ಬೇರೆ ಯಾವುದೇ ಮುಖ್ಯ ದಾಖಲೆ ಇಲ್ಲ!

ಎರಡನೆಯದು, ನಿಮ್ಮ ಲಗೇಜ್‌ಗೆ ನಿಯಮಗಳಿವೆ. ಸಣ್ಣ ಬ್ಯಾಗ್ ಅಥವಾ ವೈಯಕ್ತಿಕ ಸಾಮಾನುಗಳನ್ನು ಸಾಮಾನ್ಯವಾಗಿ ನಿಮ್ಮೊಂದಿಗೆ ತೆಗೆದುಕೊಂಡು ಹೋಗಬಹುದು. ಆದರೆ ಅತಿಯಾದ ಅಥವಾ ಅಪಾಯಕಾರಿ ವಸ್ತುಗಳನ್ನು ಬಸ್‌ಗೆ ತರಲು ಅವಕಾಶವಿಲ್ಲ. ದುಬಾರಿ ವಸ್ತುಗಳನ್ನು ಸೀಟಿನ ಮೇಲೆ ಬಿಟ್ಟು ಇಳಿದರೆ ಅದರ ಹೊಣೆಗಾರಿಕೆ ನಿಮ್ಮದೇ ಎಂಬುದನ್ನು ಮರೆಯಬೇಡಿ.

ಮೂರನೆಯದು, ಅಪಘಾತವಾದರೆ ಪ್ರಯಾಣಿಕರಿಗೆ ಪರಿಹಾರ ಪಡೆಯುವ ಹಕ್ಕಿದೆ. ಪರಿಸ್ಥಿತಿಯನ್ನು ಅವಲಂಬಿಸಿ ವಿಮೆ, ಕಾನೂನು ಮತ್ತು ಸಾರಿಗೆ ಸಂಸ್ಥೆಯ ನಿಯಮಗಳ ಪ್ರಕಾರ ಪರಿಹಾರದ ಅವಕಾಶಗಳಿರುತ್ತವೆ. ಆದ್ದರಿಂದ ಟಿಕೆಟ್‌ನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಅತ್ಯಗತ್ಯ.

ನಾಲ್ಕನೆಯದು, ಕಂಡಕ್ಟರ್ ಅಥವಾ ಚಾಲಕರ ಅಸಭ್ಯ ವರ್ತನೆಯನ್ನು ಸಹಿಸಿಕೊಳ್ಳಬೇಕೆಂದಿಲ್ಲ. ಸಾರ್ವಜನಿಕ ಸೇವೆಯಲ್ಲಿರುವ ಸಿಬ್ಬಂದಿಯಿಂದ ಗೌರವಯುತ ವರ್ತನೆ ಪಡೆಯುವುದು ನಿಮ್ಮ ಹಕ್ಕು. ಸಮಸ್ಯೆಯಾದರೆ ಬಸ್ ಸಂಖ್ಯೆ, ಸಮಯ ಮತ್ತು ಮಾರ್ಗವನ್ನು ದಾಖಲಿಸಿಕೊಂಡು ದೂರು ನೀಡಬಹುದು.

ಐದನೆಯದು, ಅಧಿಕ ದರ ವಸೂಲಿ ಮಾಡಬಾರದು. ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆದಿದ್ದರೆ ಪ್ರಶ್ನಿಸುವ ಹಕ್ಕು ನಿಮಗಿದೆ. ಟಿಕೆಟ್‌ನಲ್ಲಿರುವ ದರವನ್ನು ಒಮ್ಮೆ ಪರಿಶೀಲಿಸುವ ಅಭ್ಯಾಸ ಒಳ್ಳೆಯದು.

ಆರನೆಯದು, ಮಹಿಳೆಯರು, ಹಿರಿಯ ನಾಗರಿಕರು ಮತ್ತು ವಿಶೇಷಚೇತನರಿಗೆ ಮೀಸಲು ಆಸನಗಳು ಕೇವಲ ಬಣ್ಣದ ಗುರುತುಗಳಲ್ಲ. ಅವು ಕೂಡ ಅರ್ಹರ ಹಕ್ಕುಗಳು. ಅವುಗಳನ್ನು ಗೌರವಿಸುವುದು ಎಲ್ಲ ಪ್ರಯಾಣಿಕರ ಜವಾಬ್ದಾರಿಯೂ ಹೌದು.

ಏಳನೆಯದು, ಬಸ್ ಮಧ್ಯದಲ್ಲೇ ಕೆಟ್ಟು ನಿಂತರೆ ಮಾಹಿತಿ ಕೇಳುವ ಹಕ್ಕು ನಿಮಗಿದೆ. ಪರ್ಯಾಯ ವ್ಯವಸ್ಥೆ ಏನು, ಎಷ್ಟು ಸಮಯ ಬೇಕು ಎಂಬುದನ್ನು ಸಿಬ್ಬಂದಿಯ ಬಳಿ ಕೇಳಬಹುದು.

ಎಂಟನೆಯದು, ಕಳೆದುಹೋದ ವಸ್ತುಗಳು ಸಿಕ್ಕರೆ ಮರಳಿ ಪಡೆಯುವ ಅವಕಾಶವಿದೆ. ಬಸ್ ಸಂಖ್ಯೆ, ಮಾರ್ಗ ಮತ್ತು ಸಮಯದ ಮಾಹಿತಿ ಇದ್ದರೆ ಸಂಬಂಧಿಸಿದ ಡಿಪೋಗೆ ತಕ್ಷಣ ತಿಳಿಸಿದರೆ  ಈ ಸಾಧ್ಯತೆ ಹೆಚ್ಚಿರುತ್ತದೆ.

ಒಂಬತ್ತನೆಯದು, ದೂರು ನೀಡುವುದು ವ್ಯರ್ಥವಲ್ಲ. ಕೆಎಸ್‌ಆರ್‌ಟಿಸಿ ದೂರು ಸ್ವೀಕರಿಸುವ ವ್ಯವಸ್ಥೆ ಹೊಂದಿದೆ. ಬಸ್ ಸಂಖ್ಯೆ, ಚಾಲಕ ಅಥವಾ ಕಂಡಕ್ಟರ್ ಹೆಸರು, ಸಮಯ, ಸ್ಥಳದ ವಿವರ ನೀಡಿದರೆ ಕ್ರಮ ಕೈಗೊಳ್ಳುವ ಸಾಧ್ಯತೆ ಹೆಚ್ಚುತ್ತದೆ.

ಹತ್ತನೆಯದು, ನಿಯಮ ಪಾಲಿಸುವ ಜವಾಬ್ದಾರಿಯೂ ಪ್ರಯಾಣಿಕರದ್ದೇ. ಬಾಗಿಲಲ್ಲಿ ನೇತಾಡುವುದು, ಚಾಲಕನ ಗಮನ ಬೇರೆಡೆ ಸೆಳೆಯುವುದು, ಬಸ್ ಚಲಿಸುತ್ತಿರುವಾಗ ಏರುವುದು ಅಥವಾ ಇಳಿಯುವುದು, ಧೂಮಪಾನ ಅಥವಾ ಇತರರಿಗೆ ತೊಂದರೆ ಕೊಡುವ ವರ್ತನೆ ಮಾಡಬಾರದು. ಹಕ್ಕುಗಳ ಜೊತೆಗೆ ಜವಾಬ್ದಾರಿಗಳೂ ಇದ್ದಾಗಲೇ ಪ್ರಯಾಣ ಸುರಕ್ಷಿತವಾಗುತ್ತದೆ.

ನಾವು ಪ್ರತಿದಿನ ಬಸ್‌ನಲ್ಲಿ ಪ್ರಯಾಣಿಸುತ್ತೇವೆ. ಆದರೆ ಪ್ರಯಾಣಿಕನ ಹಕ್ಕುಗಳ ಬಗ್ಗೆ ಯೋಚಿಸುವುದು ಅಪರೂಪ. ಒಂದು ಚಿಕ್ಕ ಟಿಕೆಟ್, ಸ್ವಲ್ಪ ಮಾಹಿತಿ ಮತ್ತು ಸ್ವಲ್ಪ ಜಾಗರೂಕತೆ ಇದ್ದರೆ ಪ್ರಯಾಣ ಇನ್ನಷ್ಟು ಸುರಕ್ಷಿತವೂ, ಸುಗಮವೂ ಆಗುತ್ತದೆ. ಮುಂದಿನ ಬಾರಿ ಕೆಎಸ್‌ಆರ್‌ಟಿಸಿ ಬಸ್ ಏರುವಾಗ ಟಿಕೆಟ್ ಮಾತ್ರವಲ್ಲ, ನಿಮ್ಮ ಹಕ್ಕುಗಳನ್ನೂ ಜೊತೆಗೆ ಕೊಂಡೊಯ್ಯಿರಿ!

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share