ಕರ್ನಾಟಕ ರಾಜಕೀಯದಲ್ಲಿ ಕೆಲವರು ಹುದ್ದೆಯಿಂದ ದೊಡ್ಡವರಾಗುತ್ತಾರೆ. ಮತ್ತೆ ಕೆಲವರು ವಿವಾದಗಳಿಂದಲೇ ದೊಡ್ಡವರಾಗುತ್ತಾರೆ. ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಎರಡನೇ ಸಾಲಿಗೆ ಸೇರುವ ನಾಯಕನೆನಿಸಿಕೊಳ್ಳುತ್ತಿದ್ದಾರೆ.
ಐದು ವರ್ಷಗಳ ಹಿಂದೆ ರಾಜಕೀಯದಲ್ಲಿ ಯಾರಿಗೂ ಪರಿಚಯವಿಲ್ಲದ ಯುವಕನೊಬ್ಬ, ಇಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬಹಿರಂಗವಾಗಿ ಸವಾಲು ಹಾಕುವ ಮಟ್ಟಕ್ಕೆ ಬೆಳೆದಿದ್ದಾರೆ. ಡಾ. ಕೆ. ಸುಧಾಕರ್ ವಿರುದ್ಧದ ನಿರಂತರ ಹೋರಾಟದಿಂದ ಆರಂಭವಾದ ರಾಜಕೀಯ ಪಯಣ, ಇಂದು ಜೆಡಿಎಸ್ ನಾಯಕತ್ವದೊಂದಿಗಿನ ನೇರ ಸಂಘರ್ಷಕ್ಕೆ ತಲುಪಿದೆ. ಇದು ಕೇವಲ ಇಬ್ಬರು ನಾಯಕರ ನಡುವಿನ ಮಾತಿನ ಸಮರವೇ, ಅಥವಾ ಕರ್ನಾಟಕ ರಾಜಕೀಯದಲ್ಲಿ ಹೊಸ ಶೈಲಿಯ ಉದಯವೇ?
ಪ್ರದೀಪ್ ಈಶ್ವರ್ ಅವರ ರಾಜಕೀಯ ಪಯಣ ಸಾಂಪ್ರದಾಯಿಕ ರಾಜಕಾರಣಿಗಳಂತಿರಲಿಲ್ಲ. ಅವರ ಹಿಂದೆ ರಾಜಕೀಯ ಕುಟುಂಬ ಇರಲಿಲ್ಲ. ಕ್ಷೇತ್ರದಲ್ಲಿ ಬಲಿಷ್ಠ ಸಂಘಟನೆ ಇರಲಿಲ್ಲ. ಇದ್ದದ್ದು ಒಂದು ಉತ್ಕಟ ಛಲ, ಮಾತನಾಡುವ ಕಲೆ ಮತ್ತು ವ್ಯವಸ್ಥೆಯನ್ನು ಪ್ರಶ್ನಿಸುವ ಧೈರ್ಯ.
2018ರ ವಿಧಾನಸಭೆ ಚುನಾವಣೆಯಲ್ಲಿಯೇ ಅವರು ಮೊದಲ ಬಾರಿಗೆ ಸಾರ್ವಜನಿಕವಾಗಿ ಗಮನ ಸೆಳೆದರು. ಪಕ್ಷೇತರ ಅಭ್ಯರ್ಥಿ ಕೆ.ವಿ. ನವೀನ್ ಕಿರಣ್ ಪರ ಪ್ರಚಾರ ನಡೆಸುತ್ತಾ ಆಗಿನ ಪ್ರಭಾವಿ ಶಾಸಕ ಡಾ. ಕೆ. ಸುಧಾಕರ್ ವಿರುದ್ಧ ವೇದಿಕೆಗಳಿಂದಲೇ ಪ್ರಶ್ನೆಗಳ ಸುರಿಮಳೆಗೈದರು. ಸಾಮಾಜಿಕ ಜಾಲತಾಣಗಳನ್ನು ಅಸ್ತ್ರವಾಗಿಸಿಕೊಂಡು ಸುಧಾಕರ್ ವಿರುದ್ಧ ಅಭಿಯಾನ ಆರಂಭಿಸಿದರು. ಆಗ ಹಲವರಿಗೆ ಅವರು ಕೇವಲ “ಯೂಟ್ಯೂಬ್ ಭಾಷಣಗಾರ”ನಂತೆ ಕಂಡಿದ್ದರು.
ಆದರೆ ಆ ಹೋರಾಟ ಅವರಿಗೆ ದುಬಾರಿಯಾಯಿತು. ಹಲವು ಬಾರಿ ಹಲ್ಲೆಗೊಳಗಾದರು. ಬಂಧನದ ಬಳಿಕ ಪೊಲೀಸ್ ಠಾಣೆ ಎದುರೇ ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ಉದ್ವಿಗ್ನಗೊಂಡು ಅವರ ಭದ್ರತೆಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವ ಮಟ್ಟಕ್ಕೂ ಬೆಳವಣಿಗೆ ತಲುಪಿತ್ತು. ಅಷ್ಟರಲ್ಲೇ ಪ್ರದೀಪ್ ಈಶ್ವರ್ ಎಂಬ ಹೆಸರು ಚಿಕ್ಕಬಳ್ಳಾಪುರದಾಚೆಯೂ ಕೇಳಿಸತೊಡಗಿತ್ತು.
2018ರ ಸೋಲಿನ ನಂತರ ಅವರು ರಾಜಕೀಯದಿಂದ ದೂರ ಸರಿಯಲಿಲ್ಲ. ಕೆಲಕಾಲ ರಾಜ್ಯದ ಹೊರಗೂ ಸಂಚರಿಸಿ, ಬಳಿಕ ಬೆಂಗಳೂರಿನಲ್ಲಿ “ಪರಿಶ್ರಮ ನೀಟ್ ಅಕಾಡೆಮಿ” ಆರಂಭಿಸಿದರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಾ ತಮ್ಮದೇ ಆದ ಅಭಿಮಾನಿ ವಲಯವನ್ನು ನಿರ್ಮಿಸಿಕೊಂಡರು. ರಾಜಕೀಯದಿಂದ ದೂರವಿದ್ದರೂ ಸಾರ್ವಜನಿಕ ಬದುಕಿನಿಂದ ದೂರವಾಗಲಿಲ್ಲ.
ಈ ಮಧ್ಯೆ ಕಾಂಗ್ರೆಸ್ ಹೊಸ ಮುಖವನ್ನು ಹುಡುಕುತ್ತಿತ್ತು. ಡಾ. ಸುಧಾಕರ್ ವಿರುದ್ಧ ಪ್ರಬಲ ಅಭ್ಯರ್ಥಿಯ ಅಗತ್ಯವಿತ್ತು. ಸುಧಾಕರ್ ವಿರುದ್ಧ ನಿರಂತರವಾಗಿ ಮಾತನಾಡುತ್ತಿದ್ದ ಪ್ರದೀಪ್ ಈಶ್ವರ್ ಅವರೇ ಪಕ್ಷದ ಆಯ್ಕೆಯಾದರು. ಆಡಳಿತ ವಿರೋಧಿ ಅಲೆ, ಅವರ ಆಕ್ರಮಣಕಾರಿ ಭಾಷಣ ಶೈಲಿ ಮತ್ತು ಕ್ಷೇತ್ರದ ಸಾಮಾಜಿಕ ಸಮೀಕರಣಗಳು ಒಟ್ಟಾಗಿ ಅವರಿಗೆ ಗೆಲುವು ತಂದುಕೊಟ್ಟವು.
ಆದರೆ ಶಾಸಕರಾದ ಬಳಿಕವೂ ಪ್ರದೀಪ್ ಅವರ ರಾಜಕೀಯ ಶೈಲಿ ಬದಲಾಗಲಿಲ್ಲ. ಅವರು ಸಂಪ್ರದಾಯಬದ್ಧ ರಾಜಕಾರಣಿಯಂತೆ ಮಾತನಾಡುವುದಕ್ಕಿಂತ ನೇರವಾಗಿ ಎದುರಾಳಿಯನ್ನೇ ಗುರಿಯಾಗಿಸುವ ಶೈಲಿಯನ್ನು ಮುಂದುವರಿಸಿದರು. ಇದೇ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯರನ್ನಾಗಿಸಿತು, ವಿವಾದಗಳಿಗೂ ಕಾರಣವಾಯಿತು.
ಇತ್ತೀಚಿನ ದಿನಗಳಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಅವರು ನಡೆಸುತ್ತಿರುವ ತೀವ್ರ ವಾಗ್ದಾಳಿ ಈ ಶೈಲಿಯ ಮುಂದುವರಿದ ಭಾಗವೇ ಆಗಿದೆ. ಇಬ್ಬರ ನಡುವಿನ ಮಾತಿನ ಸಮರ ವೈಯಕ್ತಿಕ ಟೀಕೆಗಳವರೆಗೂ ತಲುಪಿದ್ದು, ಬೆಂಬಲಿಗರ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಚಿಕ್ಕಬಳ್ಳಾಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರದೀಪ್ ಈಶ್ವರ್ ಅವರತ್ತ ಚಪ್ಪಲಿ ಎಸೆದ ಘಟನೆ ಈ ಸಂಘರ್ಷಕ್ಕೆ ಇನ್ನಷ್ಟು ರಾಜಕೀಯ ಬಣ್ಣ ಹಚ್ಚಿದೆ. ಘಟನೆ ಖಂಡನೀಯವಾದರೂ, ಅದರಿಂದ ಪ್ರದೀಪ್ ಈಶ್ವರ್ ಮತ್ತೊಮ್ಮೆ ರಾಜ್ಯಮಟ್ಟದ ಸುದ್ದಿಯಾಗಿದ್ದಾರೆ.
ರಾಜಕೀಯ ವಿಶ್ಲೇಷಕರ ಪ್ರಕಾರ, ಪ್ರದೀಪ್ ಈಶ್ವರ್ ಅವರ ದೊಡ್ಡ ಶಕ್ತಿ ಅವರ ಭಾಷಣ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವ. ಆದರೆ ಇದೇ ಶೈಲಿ ಕೆಲವೊಮ್ಮೆ ಅವರ ವಿರುದ್ಧವೂ ತಿರುಗಬಹುದು. ಏಕೆಂದರೆ ನಿರಂತರ ಸಂಘರ್ಷದ ರಾಜಕೀಯ ಜನರ ಗಮನ ಸೆಳೆಯುತ್ತದೆ. ಆದರೆ ದೀರ್ಘಾವಧಿಯಲ್ಲಿ ಅಭಿವೃದ್ಧಿ ಮತ್ತು ಆಡಳಿತದ ಫಲಿತಾಂಶಗಳನ್ನೂ ಜನರು ಅಳೆಯಲು ಆರಂಭಿಸುತ್ತಾರೆ.
ಮತ್ತೊಂದೆಡೆ ಎಚ್.ಡಿ. ಕುಮಾರಸ್ವಾಮಿ ಅವರಂತಹ ಅನುಭವಿ ನಾಯಕರೊಂದಿಗೆ ನೇರ ಸಂಘರ್ಷ ನಡೆಸುವುದು ಪ್ರದೀಪ್ ಈಶ್ವರ್ ಅವರಿಗೆ ರಾಜ್ಯಮಟ್ಟದ ಗುರುತನ್ನು ತಂದುಕೊಡುತ್ತಿದೆ. ಕಾಂಗ್ರೆಸ್ನಲ್ಲಿಯೂ ಅವರು ಯುವ ನಾಯಕನಾಗಿ ಗಮನ ಸೆಳೆಯುತ್ತಿದ್ದಾರೆ.
ಡಾ. ಸುಧಾಕರ್ ವಿರುದ್ಧ ಹೋರಾಡಿ ರಾಜಕೀಯಕ್ಕೆ ಬಂದ ಯುವ ನಾಯಕ ಇಂದು ಎಚ್.ಡಿ. ಕುಮಾರಸ್ವಾಮಿ ಅವರನ್ನೇ ಸವಾಲು ಹಾಕುವ ಮಟ್ಟಕ್ಕೆ ಬೆಳೆದಿದ್ದಾರೆ. ಇದು ಪ್ರದೀಪ್ ಈಶ್ವರ್ ಅವರ ರಾಜಕೀಯ ಬೆಳವಣಿಗೆಯ ಒಂದು ಹಂತ ಮಾತ್ರ. ಆದರೆ ಮುಂದಿನ ದಿನಗಳಲ್ಲಿ ಅವರು “ವಿವಾದಗಳ ನಾಯಕ” ಎಂಬ ಹಣೆಪಟ್ಟಿಯನ್ನು ಮೀರಿ “ಪರಿಣಾಮಕಾರಿ ಜನನಾಯಕ” ಆಗಿ ರೂಪುಗೊಳ್ಳುತ್ತಾರೆಯೇ, ಅಥವಾ ನಿರಂತರ ಸಂಘರ್ಷದ ರಾಜಕೀಯದಲ್ಲೇ ಸೀಮಿತರಾಗುತ್ತಾರೆಯೇ ಎಂಬುದೇ ಅವರ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ.