ಮುಂಡಗೋಡ: ಮನೆಯ ಹಿಂಭಾಗದಲ್ಲಿದ್ದ ಕೋಳಿ ಗೂಡಿಗೆ ಬೃಹದಾಕಾರದ ಹೆಬ್ಬಾವೊಂದು ನುಗ್ಗಿ ಐದು ಕೋಳಿಗಳನ್ನು ನುಂಗಿ, ಮತ್ತೇಳು ಕೋಳಿಗಳನ್ನು ಕೊಂದು ಹಾಕಿರುವ ಘಟನೆ ಮುಂಡಗೋಡ ತಾಲೂಕಿನ ಕಾತೂರ ವಲಯದ ಪಾಳಾ ಶಾಖೆಯ ಕೊಡಂಬಿ ಗ್ರಾಮದಲ್ಲಿ ನಡೆದಿದ್ದು, ಅರಣ್ಯ ಇಲಾಖೆಯ ಉರಗ ರಕ್ಷಕರು ಕೋಳಿ ಹಂತಕ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಗ್ರಾಮದ ನಾರಾಯಣ ಓಣಿಕೆರಿ ಅವರ ವಾಸದ ಮನೆಯ ಹಿಂಭಾಗದಲ್ಲಿರುವ ಕೋಳಿ ಗೂಡಿನಲ್ಲಿ ಹೆಬ್ಬಾವು ಕಾಣಿಸಿಕೊಂಡು, ಐದು ಕೋಳಿಗಳನ್ನು ನುಂಗಿದ್ದು, ಗೂಡಿನಲ್ಲಿದ್ದ ಇನ್ನೂ ಏಳು ಕೋಳಿಗಳನ್ನು ಕೊಂದು ಹಾಕಿರುವುದು ಕಂಡುಬಂದಿದೆ.
ವಿಷಯ ತಿಳಿದ ತಕ್ಷಣ ನಾರಾಯಣ ಓಣಿಕೆರಿ ಅವರು ಪಾಳಾ ಉಪ ವಲಯ ಅರಣ್ಯಾಧಿಕಾರಿ ಸುನೀಲ್ ಹೊನ್ನಾವರ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೃಹದಾಕಾರದ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ರಕ್ಷಿಸಿದ್ದಾರೆ.
ನಂತರ ಹೆಬ್ಬಾವನ್ನು ಸಮೀಪದ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಸುರಕ್ಷಿತವಾಗಿ ಬಿಡಲಾಯಿತು.
ಕಾರ್ಯಾಚರಣೆಯಲ್ಲಿ ಅರಣ್ಯ ವೀಕ್ಷಕರಾದ ನಾರಾಯಣ, ಬಸವರಾಜ್ ಎನ್. ವಾಲ್ಮೀಕಿ, ಪ್ರಕಾಶ್ ಬಳ್ಳಾರಿ, ಜಗದೀಶ್ ಗೌಡ್ರು ಹಾಗೂ ನಾರಾಯಣ ಓಣಿಕೆರಿ ಅವರ ಮಕ್ಕಳಾದ ಅಣ್ಣಪ್ಪ ಓಣಿಕೆರಿ, ಸಚಿನ್ ಓಣಿಕೆರಿ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಅರಣ್ಯ ಪ್ರದೇಶದ ಸುತ್ತಮುತ್ತ ವಾಸಿಸುವ ಜನರು ಹಾವುಗಳು ಕಂಡುಬಂದಾಗ ಆತಂಕಕ್ಕೊಳಗಾಗದೆ, ಅವುಗಳನ್ನು ಹಿಡಿಯಲು ಅಥವಾ ಹಾನಿ ಮಾಡಲು ಮುಂದಾಗದೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.