ಮಕ್ಕಳಿಗೆ ಸಿಇಒ ಆನಂದಸಾ ಹಬೀಬ್ ಕಿವಿಮಾತು
ಮುಂಡಗೋಡ: ಒಂದು ಪರೀಕ್ಷೆಯಲ್ಲಿ ಸೋತರೆ ಜೀವನವೇ ಸೋತಂತಲ್ಲ. ಬದಲಿಗೆ ಆ ಸೋಲಿನಿಂದ ಪಾಠ ಕಲಿತು ಮತ್ತಷ್ಟು ಪರಿಶ್ರಮದಿಂದ ಮುನ್ನಡೆದರೆ ಅದೇ ಸೋಲು ಗೆಲುವಿನ ಮೆಟ್ಟಿಲಾಗಬಹುದು ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ್ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯದ ಪಾಠ ಹೇಳಿದರು.
ಮುಂಡಗೋಡ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ತಮ್ಮದೇ ಜೀವನದ ಅನುಭವವನ್ನು ಮಕ್ಕಳ ಮುಂದೆ ಹಂಚಿಕೊಂಡರು.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾವು ಮೂರು ಬಾರಿ ಅನುತ್ತೀರ್ಣರಾಗಿದ್ದರೂ ಪ್ರಯತ್ನ ಕೈಬಿಡಲಿಲ್ಲ. ಅಂದಿನ ಅಚಲ ನಿರ್ಧಾರ ಹಾಗೂ ನಿರಂತರ ಪರಿಶ್ರಮದ ಫಲವಾಗಿ ಬಳಿಕ ಎದುರಿಸಿದ ಯಾವುದೇ ಪರೀಕ್ಷೆಯಲ್ಲೂ ಸೋಲು ಕಾಣಲಿಲ್ಲ ಎಂದು ಹೇಳಿದರು.
ನನ್ನಂತಹ ಸಾಮಾನ್ಯ ವ್ಯಕ್ತಿಗೆ ಈ ಮಟ್ಟಿನ ಯಶಸ್ಸು ಸಾಧ್ಯವಾಗಿದ್ದರೆ, ನಿಮ್ಮಿಂದ ಇನ್ನೂ ದೊಡ್ಡ ಸಾಧನೆ ಸಾಧ್ಯವಿದೆ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದ ಅವರು, ತಮ್ಮ ನ್ಯೂನತೆಗಳನ್ನು ಗುರುತಿಸಿಕೊಂಡು ಅವುಗಳನ್ನು ಸರಿಪಡಿಸಿಕೊಳ್ಳಬೇಕು. ಯಾವುದೇ ಹಂತದಲ್ಲೂ ಧೃತಿಗೆಡದೆ ಗುರಿಯತ್ತ ನಿರಂತರವಾಗಿ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಇದಕ್ಕೂ ಮುನ್ನ ಮುಂಡಗೋಡ ನಗರದ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ, ಜ್ಞಾನ ಪ್ರಜ್ಞಾ ಅಂಧ ಮಕ್ಕಳ ವಸತಿಯುತ ಶಾಲೆ ಹಾಗೂ ದೇಶಪಾಂಡೆ ನಗರದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಆನಂದಸಾ ಹಬೀಬ್, ಮಕ್ಕಳೊಂದಿಗೆ ಬೆರೆತು ಅವರೊಂದಿಗೆ ಸಂವಾದ ನಡೆಸಿದರು. ಅಂಧ ಮಕ್ಕಳ ಶಾಲೆಯಲ್ಲಿನ ಮಕ್ಕಳ ಪ್ರತಿಭೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಯೋಜನಾ ಅಧಿಕಾರಿ ಚೋಳಪ್ಪ ಬಣಕಾರ, ಕ್ಷೇತ್ರ ಶಿಕ್ಷಣಾಧಿಕಾರಿ ಸುಮಾ, ಸಿಡಿಪಿಒ ಸಂಜೀವ್ ಕುಮಾರ್, ವಾರ್ಡನ್ ಕರಿಯಪ್ಪ ಸೇರಿದಂತೆ ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕರು ಹಾಗೂ ವಸತಿ ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು.