ಮುಂಡಗೋಡ: ಮುಂಡಗೋಡ ತಾಲೂಕಿನಲ್ಲಿ ಕಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾರ್ವಜನಿಕರ ಆತಂಕವೂ ಗಂಭೀರವಾಗುತ್ತಿದೆ. ಒಂದೆಡೆ ಮನೆ, ಅಂಗಡಿಗಳ ಕಳ್ಳತನ, ಮತ್ತೊಂದೆಡೆ ದೇವಾಲಯಗಳನ್ನೂ ಬಿಡದ ಕಳ್ಳರು ಈಗ ಪೊಲೀಸರಿಗೆ ನೇರ ಸವಾಲು ಹಾಕಿದಂತಾಗಿದೆ.
ಗುರುವಾರ ರಾತ್ರಿ ತಾಲೂಕಿನ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಬಾಚಣಕಿ ಗ್ರಾಮದ ಪ್ರಸಿದ್ಧ ಮರಿಯಮ್ಮ ದೇವಸ್ಥಾನ ಕಳ್ಳರ ಮೊದಲ ಗುರಿಯಾಗಿದೆ. ದೇವಸ್ಥಾನದ ಬೀಗ ಮುರಿದು ಒಳನುಗ್ಗಿದ ದುಷ್ಕರ್ಮಿಗಳು, ಕಾಣಿಕೆ ಹುಂಡಿಯನ್ನೇ ಹೊತ್ತುಕೊಂಡು ಪರಾರಿಯಾಗಿದ್ದಾರೆ. ಸ್ಥಳೀಯರ ಮಾಹಿತಿ ಪ್ರಕಾರ, ಕಳೆದ ಎರಡು ವರ್ಷಗಳಿಂದ ಹುಂಡಿ ತೆರೆಯದ ಕಾರಣ ಅದರಲ್ಲಿ ಸಾಕಷ್ಟು ಕಾಣಿಕೆ ಹಣ ಸಂಗ್ರಹವಾಗಿರುವ ಸಾಧ್ಯತೆ ಇದೆ.
ಇದೇ ರಾತ್ರಿ ನಂದಿಪುರ ಗ್ರಾಮದಲ್ಲಿರುವ ಶ್ರೀನಿವಾಸ್ ಅವರ ಅಂಗಡಿಯ ಬೀಗವನ್ನೂ ಮುರಿದು ಕಳ್ಳರು ಒಳನುಗ್ಗಿದ್ದಾರೆ. ಅಂಗಡಿಯಿಂದ ಎಷ್ಟು ನಗದು ಅಥವಾ ವಸ್ತುಗಳು ಕಳುವಾಗಿವೆ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಮುಂಡಗೋಡ ಪೊಲೀಸರು ಎರಡೂ ಕಳ್ಳತನ ನಡೆದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಾತ್ರಿ ಗಸ್ತು ಬಲಪಡಿಸಿ ಕಳ್ಳರ ಜಾಲವನ್ನು ಭೇದಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. “ಕಳ್ಳರು ದೇವಾಲಯವನ್ನೂ ಬಿಡುತ್ತಿಲ್ಲ, ಅಂಗಡಿಗಳನ್ನೂ ಬಿಡುತ್ತಿಲ್ಲ. ಈಗ ಜನರ ಭದ್ರತೆ ಎಲ್ಲಿದೆ?” ಎಂಬ ಪ್ರಶ್ನೆ ಸ್ಥಳೀಯರಿಂದ ಕೇಳಿಬರುತ್ತಿದೆ.