ಯಲ್ಲಾಪುರ: ಪಟ್ಟಣದ ನಾರಾಯಣಪುರ ರಸ್ತೆಯಲ್ಲಿರುವ ಪಿಎಲ್ಡಿ ಬ್ಯಾಂಕ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ ಆರೋಪದ ಮೇಲೆ 10 ಮಂದಿಯ ವಿರುದ್ಧ ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸೆಪ್ಟೆಂಬರ್ 14ರಂದು ಸಂಜೆ 6.30ರ ಸುಮಾರಿಗೆ ಯಲ್ಲಾಪುರ ಪೊಲೀಸ್ ಠಾಣೆಯ ಪಿಎಸ್ಐ ರಾಜಶೇಖರ ವಂದಲಿ ಹಾಗೂ ಸಿಬ್ಬಂದಿ, ಪಂಚರೊಂದಿಗೆ ದಾಳಿ ನಡೆಸಿದ ವೇಳೆ ಆರೋಪಿತರು ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿರುವುದು ಪತ್ತೆಯಾಗಿದೆ ಎನ್ನಲಾಗಿದೆ.
ದಾಳಿಯ ವೇಳೆ ಆರೋಪಿಗಳಿಂದ ಹಾಗೂ ಜೂಜಾಟದ ಸ್ಥಳದಲ್ಲಿದ್ದ ಹಣ ಸೇರಿದಂತೆ ಒಟ್ಟು 3,400 ರೂ ನಗದು ಹಾಗೂ ಜೂಜಾಟಕ್ಕೆ ಬಳಸುತ್ತಿದ್ದ ಸಲಕರಣೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರವೀಂದ್ರನಗರದ ನಾಗರಾಜ ಪರಶುರಾಮ ಭೋವಿವಡ್ಡರ (22), ಮನೋಜ ಕರಿಯಪ್ಪ ಹರನಾಳಗಿ (26), ಉದಯ ಪಾಂಡುರಂಗ ಭೋವಿವಡ್ಡರ (32), ವೆಂಕಟೇಶ ರೇಣಪ್ಪ ಭೋವಿವಡ್ಡರ (28), ಶಂಕರ ದುರ್ಗಪ್ಪ ಭೋವಿವಡ್ಡರ (38), ಸೂರಜ ಪಾಂಡುರಂಗ ಭೋವಿವಡ್ಡರ (38), ಕಿರಣ ಹನುಮಂತ ಭೋವಿವಡ್ಡರ (21), ನಾಗರಾಜ ಹನುಮಂತಪ್ಪ ಭೋವಿವಡ್ಡರ (22), ಚಂದ್ರು ರೇಣಪ್ಪ ಭೋವಿವಡ್ಡರ (23) ಹಾಗೂ ಪವನ ರಾಜು ಭೋವಿವಡ್ಡರ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.