ಯಲ್ಲಾಪುರ: ಪಟ್ಟಣದ ಎರಡು ಪ್ರತ್ಯೇಕ ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ಸೇವಿಸಿ ಅಮಲಿನಲ್ಲಿದ್ದ ಇಬ್ಬರನ್ನು ಯಲ್ಲಾಪುರ ಪೊಲೀಸರು ಪತ್ತೆಹಚ್ಚಿದ್ದು, ಇಬ್ಬರ ವಿರುದ್ಧವೂ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಆ.11ರಂದು ಮಧ್ಯಾಹ್ನ ಯಲ್ಲಾಪುರ–ಕಿರವತ್ತಿ ರಸ್ತೆಯ ಜಮಗುಳಿ ಬಸ್ ನಿಲ್ದಾಣದ ಸಮೀಪ ಗಾಂಜಾ ಸೇವನೆಯ ಅಮಲಿನಲ್ಲಿದ್ದ ಉತ್ತರ ಪ್ರದೇಶ ಮೂಲದ, ಸದ್ಯ ಕೋಳಿಕೇರಿಯಲ್ಲಿ ವಾಸವಾಗಿರುವ ಚಾಲಕ ಶಾಹೀದ್ ಅಲಿ ಬೈತುಲ್ಲಾಹ ಖಾನ್ (30) ಪೊಲೀಸರ ಕೈಗೆ ಸಿಕ್ಕಿದ್ದಾನೆ. ವೈದ್ಯಕೀಯ ಪರೀಕ್ಷೆ ನಡೆಸಿದಾಗ ಗಾಂಜಾ ಸೇವಿಸಿರುವುದು ದೃಢಪಟ್ಟಿದ್ದು, ಪಿಎಸ್ಐ ರಾಜಶೇಖರ ವಂದಲಿ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಇದೇ ದಿನ ಸಂಜೆ 5.30ರ ಸುಮಾರಿಗೆ ಪಟ್ಟಣದ ತಹಶೀಲ್ದಾರ್ ಕಚೇರಿ ಸಮೀಪವೂ ಗಾಂಜಾ ಅಮಲಿನಲ್ಲಿದ್ದ ಮತ್ತೊಬ್ಬ ವ್ಯಕ್ತಿ ಪತ್ತೆಯಾಗಿದ್ದಾನೆ. ಮಾದನಸರ ನಿವಾಸಿ, ಕೂಲಿ ಕಾರ್ಮಿಕ ಹಜರತಅಲಿ ಸೈಯದ್ ಸಾಬ್ ಜಂಡೇವಾಲೆ (29) ಈತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಪರೀಕ್ಷಾ ವರದಿಯಲ್ಲಿ ಗಾಂಜಾ ಸೇವನೆ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್ಐ ಸಿದ್ದಪ್ಪ ಗುಡಿ ಅವರ ದೂರಿನ ಆಧಾರದ ಮೇಲೆ ಎನ್ಡಿಪಿಎಸ್ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.