Friday, July 24, 2026
Join WhatsApp Group
HomeInformationತರಕಾರಿ ತೊಳೆಯುವಾಗ ಈ ತಪ್ಪು ಮಾಡುತ್ತಿದ್ದೀರಾ?

ತರಕಾರಿ ತೊಳೆಯುವಾಗ ಈ ತಪ್ಪು ಮಾಡುತ್ತಿದ್ದೀರಾ?

ಬೆಳಗ್ಗೆ ತರಕಾರಿ ಚೀಲ ಹಿಡಿದು ಮನೆಗೆ ಬಂದ ತಕ್ಷಣ ನಮ್ಮಲ್ಲಿ ಬಹುತೇಕರು ಮಾಡುವ ಮೊದಲ ಕೆಲಸ ಏನು ಗೊತ್ತಾ? ಒಂದು ಬಕೆಟ್ ನೀರಿಗೆ ಒಂದಿಷ್ಟು ಉಪ್ಪು, ಚಿಟಿಕೆ ಅರಿಶಿಣ ಹಾಕಿ ತರಕಾರಿಗಳನ್ನು ಅದರಲ್ಲಿ ಮುಳುಗಿಸುವುದು! ನಂತರ ಮನಸ್ಸಿನಲ್ಲೊಂದು ಸಮಾಧಾನ, ʻಈಗ ಎಲ್ಲ ಔಷಧಿಯೂ ಹೋಗಿರುತ್ತೆ!ʼ ಆದರೆ ನಿಜಕ್ಕೂ ಅಷ್ಟು ಸುಲಭವೇ?

ಒಂದು ಕಾಲದಲ್ಲಿ ನಮ್ಮ ಮನೆಗೆ ಬೇಕಾಗುವ ಸೊಪ್ಪು, ತರಕಾರಿ ಎಲ್ಲವೂ ಮನೆಯ ಹಿತ್ತಲಲ್ಲೇ ಬೆಳೆಯುತ್ತಿತ್ತು. ತಾಜಾ ತರಕಾರಿ ಅಡುಗೆ ಮನೆ ಸೇರುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ನಗರಗಳಷ್ಟೇ ಅಲ್ಲ, ಹಳ್ಳಿಗಳಲ್ಲೂ ಮಾರುಕಟ್ಟೆ ತರಕಾರಿಗಳೇ ಹೆಚ್ಚು. ಅವು ಯಾವ ಹೊಲದಿಂದ ಬಂದಿವೆ, ಎಷ್ಟು ಬಾರಿ ಕೀಟನಾಶಕ ಸಿಂಪಡಿಸಲಾಗಿದೆ, ಎಷ್ಟು ದಿನ ಸಂಗ್ರಹದಲ್ಲಿದ್ದವು ಎಂಬುದು ನಮಗೆ ಗೊತ್ತಿರುವುದಿಲ್ಲ. ಇದೇ ಕಾರಣಕ್ಕೆ ಹೇಗೆ ತೊಳೆದರೆ ಸುರಕ್ಷಿತ? ಎಂಬ ಪ್ರಶ್ನೆ ಕಾಡುತ್ತಲೇ ಇರುತ್ತದೆ.

ಮೊದಲು ಒಂದು ಸತ್ಯ ತಿಳಿದುಕೊಳ್ಳಿ. ಉಪ್ಪು ಅಥವಾ ಅರಿಶಿಣ ನೀರು ಒಳ್ಳೆಯ ಅಭ್ಯಾಸವೇ ಹೊರತು ಅದು ಜಾದೂ ಮದ್ದಲ್ಲ. ಧೂಳು, ಮಣ್ಣು, ಕೆಲವು ಸೂಕ್ಷ್ಮಜೀವಿಗಳು ಹಾಗೂ ಮೇಲ್ಮೈಯಲ್ಲಿರುವ ಕೆಲವು ಕೀಟನಾಶಕದ ಅವಶೇಷಗಳನ್ನು ಕಡಿಮೆ ಮಾಡಲು ಅದು ಸಹಾಯ ಮಾಡಬಹುದು. ಆದರೆ ತರಕಾರಿಯ ಒಳಭಾಗಕ್ಕೆ ಸೇರಿರುವ ರಾಸಾಯನಿಕವನ್ನು ಸಂಪೂರ್ಣವಾಗಿ ಹೊರತೆಗೆಯಲು ಅದಕ್ಕೆ ಸಾಧ್ಯವಿಲ್ಲ. ಹಾಗಾಗಿ ಎಂತಹ ವಿಷವಿದ್ದರೂ ಹೋಗುತ್ತದೆ ಎಂಬ ಮಾತು ವೈಜ್ಞಾನಿಕವಾಗಿ ಸರಿಯಲ್ಲ.

ಹಾಗಾದರೆ ಮನೆಯಲ್ಲೇ ಮಾಡಬಹುದಾದ ಅತ್ಯುತ್ತಮ ಉಪಾಯ ಯಾವುದು? ತಜ್ಞರು ಹೇಳುವುದು ತುಂಬ ಸರಳ. ತರಕಾರಿಗಳನ್ನು ಮೊದಲು ಹರಿಯುವ ನೀರಿನಲ್ಲಿ ಕನಿಷ್ಠ ಒಂದು ನಿಮಿಷ ಚೆನ್ನಾಗಿ ಉಜ್ಜಿ ತೊಳೆಯಿರಿ. ನಂತರ ಬೇಕಾದರೆ ಉಪ್ಪು ಅಥವಾ ಅಡಿಗೆ ಸೋಡಾ ಬೆರೆಸಿದ ನೀರಿನಲ್ಲಿ ಹತ್ತು ನಿಮಿಷ ನೆನೆಸಿಟ್ಟು ಮತ್ತೆ ಶುದ್ಧ ನೀರಿನಲ್ಲಿ ತೊಳೆಯಬಹುದು.

ಎಲೆಕೋಸು, ಹೂಕೋಸುಗಳ ಹೊರಗಿನ ಪದರಗಳನ್ನು ತೆಗೆದುಹಾಕಿ. ಸೊಪ್ಪುಗಳನ್ನು ಎರಡು-ಮೂರು ಬಾರಿ ನೀರು ಬದಲಿಸಿ ತೊಳೆಯಿರಿ. ಕ್ಯಾರೆಟ್, ಸೌತೆಕಾಯಿ, ಆಲೂಗಡ್ಡೆಯಂತಹವುಗಳ ಸಿಪ್ಪೆ ತೆಗೆದು ಬಳಸಬಹುದಾದರೆ ಇನ್ನೂ ಉತ್ತಮ.

ಆದರೆ ಒಂದು ತಪ್ಪು ಮಾತ್ರ ಮಾಡಬೇಡಿ. ಪಾತ್ರೆ ತೊಳೆಯುವ ಲಿಕ್ವಿಡ್, ಸೋಪು ಅಥವಾ ಡಿಟರ್ಜೆಂಟ್ ಬಳಸಿ ತರಕಾರಿ ತೊಳೆಯುವುದು ಅಪಾಯಕಾರಿಯಾಗಬಹುದು. ಅವುಗಳ ರಾಸಾಯನಿಕ ಅವಶೇಷಗಳೇ ಆಹಾರದೊಂದಿಗೆ ದೇಹಕ್ಕೆ ಸೇರುವ ಸಾಧ್ಯತೆ ಇರುತ್ತದೆ.

ಇಷ್ಟೆಲ್ಲ ಓದಿದ ಮೇಲೆ ತರಕಾರಿ ತಿನ್ನುವುದೇ ಬೇಡ ಅನ್ನಿಸಬಾರದು! ಯಾಕೆಂದರೆ ಆರೋಗ್ಯಕ್ಕೆ ಬೇಕಾದ ಜೀವಸತ್ವ, ನಾರಿನಾಂಶ ಮತ್ತು ಖನಿಜಗಳ ದೊಡ್ಡ ಮೂಲವೇ ತರಕಾರಿ. ಭಯಪಡುವ ಬದಲು ಸರಿಯಾದ ರೀತಿಯಲ್ಲಿ ಸ್ವಚ್ಛಗೊಳಿಸುವ ಅಭ್ಯಾಸ ಬೆಳೆಸಿಕೊಳ್ಳುವುದು ಮುಖ್ಯ. ನೆನಪಿರಲಿ, ಆರೋಗ್ಯಕರ ಅಡುಗೆ ಗ್ಯಾಸ್ ಹಚ್ಚಿದ ನಂತರ ಆರಂಭವಾಗುವುದಿಲ್ಲ… ತರಕಾರಿ ತೊಳೆಯುವಾಗಲೇ ಆರಂಭವಾಗುತ್ತದೆ!

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share