ಅಂಕೋಲಾ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಂದ ಡೀಸೆಲ್ ಸಂಗ್ರಹಿಸಿ, ಯಾವುದೇ ಪರವಾನಗಿ ಇಲ್ಲದೆ ಹೆದ್ದಾರಿ ಪಕ್ಕದಲ್ಲಿ ಅಪಾಯಕಾರಿ ರೀತಿಯಲ್ಲಿ ಶೇಖರಿಸಿಟ್ಟಿದ್ದ ಆರೋಪದ ಮೇಲೆ ಅಂಕೋಲಾ ತಾಲೂಕಿನ ರಾಮನಗುಳಿ ದುಗ್ಗನಬೈಲ್ನ ವ್ಯಕ್ತಿಯೊಬ್ಬರ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದುಗ್ಗನಬೈಲ್ ರಾಮನಗುಳಿ ನಿವಾಸಿ, ಟ್ರಾನ್ಸ್ಪೋರ್ಟ್ ಉದ್ಯಮ ನಡೆಸುತ್ತಿರುವ ಚಂದ್ರಶೇಖರ ಪಾಂಡುರಂಗ ನಾಯ್ಕ (37) ಆರೋಪಿ. ಸೆ.14ರ ಬೆಳಗಿನ ಜಾವ 1.45ರ ಸುಮಾರಿಗೆ ರಾಮನಗುಳಿ ದುಗ್ಗನಬೈಲ್ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಈ ಕಾರ್ಯ ನಡೆಯುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಂದ ಡೀಸೆಲ್ ಸಂಗ್ರಹಿಸಿ, ಅದು ಬೆಂಕಿ ಅಥವಾ ದಹ್ಯ ವಸ್ತು ಎಂಬುದು ಗೊತ್ತಿದ್ದರೂ ಯಾವುದೇ ಸುರಕ್ಷತಾ ಕ್ರಮ ಅಥವಾ ಮುಂಜಾಗ್ರತೆ ಕೈಗೊಳ್ಳದೆ ಹೆದ್ದಾರಿ ಬದಿಯಲ್ಲಿ ಸಂಗ್ರಹಿಸಿಡಲಾಗಿತ್ತು. ಅಲ್ಲದೆ, ಸಂಬಂಧಪಟ್ಟ ಪ್ರಾಧಿಕಾರದಿಂದ ಯಾವುದೇ ಪರವಾನಗಿ ಪಡೆಯದೆ ಡೀಸೆಲ್ ಶೇಖರಿಸಿಟ್ಟಿರುವ ಆರೋಪವೂ ಇದೆ.
ದಾಳಿಯ ವೇಳೆ ಸುಮಾರು 20 ಲೀಟರ್ ಡೀಸೆಲ್ ಇದ್ದ ಕ್ಯಾನ್ ಹಾಗೂ ಸುಮಾರು 10 ಲೀಟರ್ ಡೀಸೆಲ್ ಇದ್ದ ಇನ್ನೊಂದು ಕ್ಯಾನ್ ಪತ್ತೆಯಾಗಿವೆ. ಇದರೊಂದಿಗೆ ಡೀಸೆಲ್ ಸಂಗ್ರಹಿಸಲು ಬಳಸಲಾಗುತ್ತಿದ್ದ ಹಸಿರು ಬಣ್ಣದ ಪ್ಲಾಸ್ಟಿಕ್ ಪೈಪ್, ಡೀಸೆಲ್ ತುಂಬಲು ಬಳಸುತ್ತಿದ್ದ ಅರ್ಧ ಭಾಗ ಕತ್ತರಿಸಿದ ಪ್ಲಾಸ್ಟಿಕ್ ಕ್ಯಾನ್ ಹಾಗೂ ಮೋಟರ್ ಸೇರಿದಂತೆ ಇತರ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಗುರುನಾಥ ಹಾದಿಮನಿ (ಕಾ&ಸೂ) ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.