ಯಲ್ಲಾಪುರ: ಕರ್ನಾಟಕದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಒಂದು ಹೆಮ್ಮೆಯ ಕ್ಷಣ ದಾಖಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ತೀರಾ ಹಿಂದುಳಿದ ವನವಾಸಿ ಸಿದ್ದಿ ಸಮುದಾಯದವರಾದ, ವಿಧಾನಪರಿಷತ್ತಿನ ಸದಸ್ಯರಾದ ಶಾಂತಾರಾಮ ಸಿದ್ದಿಯವರು, ಸದನದಲ್ಲಿ ತತ್ಕಾಲೀನ ಸಭಾಪತಿಯಾಗಿ ಕೆಲಹೊತ್ತು ಆಸೀನರಾಗಿ ಸದನವನ್ನು ನಡೆಸಿದದ್ದು ವಿಶೇಷ ಸಾಧನೆಯಾಗಿದೆ.
ಸಭಾಪತಿ ಪೀಠವು ಕರ್ನಾಟಕದ ಶಾಸನ ವ್ಯವಸ್ಥೆಯ ಅತ್ಯುನ್ನತ ಹಾಗೂ ಪವಿತ್ರ ಸ್ಥಾನಗಳಲ್ಲಿ ಒಂದು. ಅಂತಹ ಗೌರವಾನ್ವಿತ ಸ್ಥಾನವನ್ನು ಮೊಟ್ಟಮೊದಲ ಬಾರಿಗೆ ಸಿದ್ದಿ ಸಮುದಾಯದ ಪ್ರತಿನಿಧಿ ಅಲಂಕರಿಸಿರುವುದು ನಿಜಕ್ಕೂ ಐತಿಹಾಸಿಕ ಘಟನೆ.
ದಟ್ಟ ಅರಣ್ಯ ಪ್ರದೇಶದಿಂದ ಹೊರಬಂದು, ಬಡತನದ ನಡುವೆಯೇ ಬೆಳೆದ ಒಬ್ಬ ಸಾಮಾನ್ಯ ವ್ಯಕ್ತಿ ಯಾವುದೇ ಆರ್ಥಿಕ ಶಕ್ತಿ ಅಥವಾ ಪ್ರಭಾವವಿಲ್ಲದೆ ಇಂತಹ ಸ್ಥಾನಕ್ಕೆ ಏರುವುದು ನಿಜವಾದ ಪ್ರಜಾಪ್ರಭುತ್ವದ ಸೌಂದರ್ಯ. ಇದು ಸಾಮಾನ್ಯ ಜನರ ಶಕ್ತಿ ಮತ್ತು ಅವಕಾಶಗಳ ಜೀವಂತ ಉದಾಹರಣೆ ಎಂದು ಅವರ ಅಭಿಮಾನಿ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಜನಸಾಮಾನ್ಯರು ಕೂಡ ಆಡಳಿತದ ಚುಕ್ಕಾಣಿ ಹಿಡಿಯಬಹುದು ಎಂಬುದಕ್ಕೆ ಶಾಂತಾರಾಮ ಸಿದ್ದಿಯವರ ಸಾಧನೆ ಸ್ಪಷ್ಟ ಸಾಕ್ಷಿಯಾಗಿದೆ. ಇದು ಕೇವಲ ಒಬ್ಬರ ಸಾಧನೆ ಅಲ್ಲ, ತಾಲೂಕಿನ ಹೆಮ್ಮೆಯಷ್ಟೇ ಅಲ್ಲ, ಒಂದು ಸಮುದಾಯದ ಹೆಮ್ಮೆಯ ಕ್ಷಣವೂ ಆಗಿದೆ.