>>ಬಾಲಕೃಷ್ಣ ಹೆಗಡೆ, ಶಿರಸಿ.
ನಿನ್ನೆ ನಾವು ಸಿಗರೇಟ್, ತಂಬಾಕು ಮತ್ತು ಅದರಿಂದ ಉಂಟಾಗುವ ಆರೋಗ್ಯ ಅಪಾಯಗಳ ಬಗ್ಗೆ ಮಾತನಾಡಿದ್ದೆವು. ಆದರೆ ಇಲ್ಲಿ ಮತ್ತೊಂದು ಕುತೂಹಲಕಾರಿ ಪ್ರಶ್ನೆ ಎದುರಾಗುತ್ತದೆ. ಅಪಾಯಕಾರಿಯೆಂದು ಗೊತ್ತಿದ್ದರೂ ಸಿಗರೇಟ್ ಮತ್ತು ತಂಬಾಕನ್ನು ಸರ್ಕಾರ ಸಂಪೂರ್ಣವಾಗಿ ಏಕೆ ನಿಷೇಧಿಸುವುದಿಲ್ಲ? ಉತ್ತರ ಅಷ್ಟು ಸರಳವಾಗಿಲ್ಲ. ಇದರ ಹಿಂದೆ ಕಾನೂನು, ಆರ್ಥಿಕತೆ, ಉದ್ಯೋಗ, ಸಾರ್ವಜನಿಕ ಆರೋಗ್ಯ ಮತ್ತು ಅಕ್ರಮ ಮಾರುಕಟ್ಟೆಯಂತಹ ಹಲವು ಲೆಕ್ಕಾಚಾರಗಳಿವೆ.
ಭಾರತದಲ್ಲಿ ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನಗಳನ್ನು ನಿಯಂತ್ರಿಸುವ ಪ್ರಮುಖ ಕಾನೂನು COTPA—Cigarettes and Other Tobacco Products Act, 2003. ಈ ಕಾಯಿದೆ ತಂಬಾಕನ್ನು ಸಂಪೂರ್ಣವಾಗಿ ನಿಷೇಧಿಸುವುದಕ್ಕಿಂತ ಅದರ ಬಳಕೆ ಮತ್ತು ಮಾರಾಟವನ್ನು ನಿಯಂತ್ರಿಸುವ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ನಿರ್ಬಂಧ, ತಂಬಾಕು ಉತ್ಪನ್ನಗಳ ಜಾಹೀರಾತಿಗೆ ನಿರ್ಬಂಧ, ಅಪ್ರಾಪ್ತರಿಗೆ ಮಾರಾಟ ಮಾಡದಿರುವುದು, ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ಮಾರಾಟಕ್ಕೆ ನಿರ್ಬಂಧ ಹಾಗೂ ಪ್ಯಾಕೆಟ್ಗಳ ಮೇಲೆ ಆರೋಗ್ಯ ಎಚ್ಚರಿಕೆಗಳನ್ನು ಕಡ್ಡಾಯಗೊಳಿಸುವುದು ಇದರ ಪ್ರಮುಖ ಅಂಶಗಳು.
ಅಂದರೆ ಸರ್ಕಾರದ ನಿಲುವು ಸರಳವಾಗಿ ಹೇಳುವುದಾದರೆ, ʻತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಹುದು, ಆದರೆ ಎಲ್ಲೆಂದರಲ್ಲಿ, ಯಾರಿಗಾದರೂ, ಹೇಗೆ ಬೇಕಾದರೂ ಮಾರಾಟ ಮಾಡುವಂತಿಲ್ಲ.
ಇದನ್ನೂ ಓದಿ…
ಈ ನಿಯಂತ್ರಣವನ್ನು ಜಾರಿಗೆ ತರುವ ಕೆಲಸವೂ ಒಂದೇ ಇಲಾಖೆಯದ್ದಲ್ಲ. ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಅಧಿಕಾರಿಗಳ ಸಹಯೋಗದೊಂದಿಗೆ ಪೊಲೀಸ್ ಇಲಾಖೆ ಸಾರ್ವಜನಿಕ ಧೂಮಪಾನ ನಿಯಮ ಉಲ್ಲಂಘನೆಗೆ ಕ್ರಮ ಕೈಗೊಳ್ಳುತ್ತದೆ. ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ನಗರಸಭೆ ಹಾಗೂ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಕಾಯಿದೆಯ ಅನುಷ್ಠಾನಕ್ಕೆ ಸಹಕರಿಸುತ್ತವೆ. ಆಹಾರ ಮತ್ತು ಔಷಧ ನಿಯಂತ್ರಣ ವ್ಯವಸ್ಥೆಯೂ ತಂಬಾಕು ಸಂಬಂಧಿತ ಉತ್ಪನ್ನಗಳ ಮೇಲೆ ಕಣ್ಣಿಡುತ್ತದೆ.
ಹಾಗಾದರೆ ಸಂಪೂರ್ಣ ನಿಷೇಧ ಏಕಿಲ್ಲ? ಮೊದಲ ಕಾರಣ ಆರ್ಥಿಕತೆ. ತಂಬಾಕು ಉತ್ಪಾದನೆ, ಕೃಷಿ, ಸಾಗಾಟ, ತಯಾರಿಕೆ ಮತ್ತು ಮಾರಾಟದೊಂದಿಗೆ ದೊಡ್ಡ ಪ್ರಮಾಣದ ಉದ್ಯೋಗ ಹಾಗೂ ತೆರಿಗೆ ಆದಾಯ ಜೋಡಿಸಿಕೊಂಡಿದೆ. ಒಂದೇ ದಿನದಲ್ಲಿ ಸಂಪೂರ್ಣ ನಿಷೇಧ ಹೇರಿದರೆ ಸರ್ಕಾರದ ಆದಾಯದ ಮೇಲೂ ಪರಿಣಾಮ ಬೀರುತ್ತದೆ. ಅದರ ಜೊತೆಗೆ ಕಾನೂನುಬದ್ಧ ಮಾರುಕಟ್ಟೆಯ ಬದಲಿಗೆ ಅಕ್ರಮ ಮಾರುಕಟ್ಟೆ ಬೆಳೆಯುವ ಅಪಾಯವೂ ಇದೆ.
ಇಲ್ಲಿ ಮತ್ತೊಂದು ದೊಡ್ಡ ಸಮಸ್ಯೆ ಕಳ್ಳಸಾಗಣೆ ಮತ್ತು ಅಕ್ರಮ ಉತ್ಪಾದನೆ. ಕಾನೂನುಬದ್ಧ ಮಾರಾಟ ಸಂಪೂರ್ಣವಾಗಿ ನಿಂತರೆ ಬೇಡಿಕೆ ಮಾತ್ರ ತಕ್ಷಣ ನಿಲ್ಲುವುದಿಲ್ಲ. ಆ ಬೇಡಿಕೆಯನ್ನು ಪೂರೈಸಲು ಕಳ್ಳಸಾಗಣೆ, ನಕಲಿ ಉತ್ಪನ್ನಗಳು ಹಾಗೂ ಕಳಪೆ ಗುಣಮಟ್ಟದ ತಂಬಾಕು ಮಾರುಕಟ್ಟೆಗೆ ಬರುವ ಸಾಧ್ಯತೆ ಹೆಚ್ಚುತ್ತದೆ. ಆಗ ಸರ್ಕಾರಕ್ಕೆ ಉತ್ಪನ್ನದ ಗುಣಮಟ್ಟ, ಆರೋಗ್ಯ ಎಚ್ಚರಿಕೆ, ತೆರಿಗೆ ಮತ್ತು ಮಾರಾಟದ ಮೇಲಿನ ನಿಯಂತ್ರಣ ಇನ್ನಷ್ಟು ಕಷ್ಟವಾಗಬಹುದು.
ಇದರ ನಡುವೆ ಸಂವಿಧಾನದ ವಿಚಾರವೂ ಬರುತ್ತದೆ. ವಿಧಿ 19(1)(g) ನಾಗರಿಕರಿಗೆ ಕಾನೂನುಬದ್ಧ ವೃತ್ತಿ, ವ್ಯಾಪಾರ ಅಥವಾ ವ್ಯವಹಾರ ನಡೆಸುವ ಹಕ್ಕನ್ನು ನೀಡುತ್ತದೆ. ಅದೇ ಸಮಯದಲ್ಲಿ ವಿಧಿ 47 ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯಕ್ಕೆ ಹಾನಿಕರವಾದ ಮಾದಕ ಪದಾರ್ಥಗಳ ಬಳಕೆಯನ್ನು ನಿಯಂತ್ರಿಸುವುದು ಅಥವಾ ನಿಷೇಧಿಸುವುದು ರಾಜ್ಯದ ಕರ್ತವ್ಯ ಎಂದು ಹೇಳುತ್ತದೆ. ಹೀಗಾಗಿ ತಂಬಾಕು ಮತ್ತು ಮದ್ಯದ ಸಂಪೂರ್ಣ ನಿಷೇಧದ ವಿಚಾರದಲ್ಲಿ ವ್ಯಾಪಾರ ಸ್ವಾತಂತ್ರ್ಯ, ಸಾರ್ವಜನಿಕ ಆರೋಗ್ಯ, ಆರ್ಥಿಕ ಹಿತಾಸಕ್ತಿ ಮತ್ತು ಕಾನೂನು ಜಾರಿ ಇವೆಲ್ಲವೂ ಒಂದೇ ತಕ್ಕಡಿಯಲ್ಲಿ ಬರುತ್ತವೆ.
ಇದರಲ್ಲೇ ಜಗಿಯುವ ತಂಬಾಕಿನ ಕಥೆ ಇನ್ನೂ ಕುತೂಹಲಕರ. COTPAಯಲ್ಲಿ ತಂಬಾಕು ಉತ್ಪನ್ನಗಳ ವ್ಯಾಪ್ತಿ ಸಿಗರೇಟ್ ಅಥವಾ ಬೀಡಿಗೆ ಮಾತ್ರ ಸೀಮಿತವಾಗಿಲ್ಲ. ಜಗಿಯುವ ತಂಬಾಕು, ಖೈನಿ ಸೇರಿದಂತೆ ವಿವಿಧ ತಂಬಾಕು ಉತ್ಪನ್ನಗಳೂ ಇದರ ವ್ಯಾಪ್ತಿಗೆ ಬರುತ್ತವೆ. ಆದರೆ ಗುಟ್ಕಾ ಮತ್ತು ಪಾನ್ ಮಸಾಲಾದಂತಹ ಉತ್ಪನ್ನಗಳ ವಿಷಯದಲ್ಲಿ ಆಹಾರ ಸುರಕ್ಷತಾ ಕಾನೂನು ಕೂಡ ಪ್ರಮುಖವಾಗುತ್ತದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ನಿಯಮಗಳ ಪ್ರಕಾರ ಆಹಾರ ಪದಾರ್ಥಗಳಲ್ಲಿ ತಂಬಾಕು ಅಥವಾ ನಿಕೋಟಿನ್ ಬಳಸುವುದಕ್ಕೆ ಅವಕಾಶವಿಲ್ಲ. ಇದೇ ಕಾರಣಕ್ಕೆ ತಂಬಾಕು ಒಳಗೊಂಡ ಗುಟ್ಕಾ ಮಾದರಿಯ ಉತ್ಪನ್ನಗಳ ವಿರುದ್ಧ ಆಹಾರ ಸುರಕ್ಷತಾ ಕಾನೂನಿನ ಅಡಿಯಲ್ಲಿಯೂ ಕ್ರಮ ಕೈಗೊಳ್ಳಲು ಅವಕಾಶವಿದೆ.
ಆದರೆ ʻಶುದ್ಧ ಜಗಿಯುವ ತಂಬಾಕುʼ ವಿಷಯದಲ್ಲಿ ಕಾನೂನು ವ್ಯಾಖ್ಯಾನಗಳ ಪ್ರಶ್ನೆ ಎದುರಾಗುತ್ತದೆ. ಅದನ್ನು ಆಹಾರವೆಂದು ಪರಿಗಣಿಸಬೇಕೇ ಅಥವಾ ತಂಬಾಕು ಉತ್ಪನ್ನವೆಂದು ಪರಿಗಣಿಸಬೇಕೇ ಎಂಬ ವಿಚಾರದಲ್ಲಿ ನ್ಯಾಯಾಲಯಗಳ ಮುಂದೆ ಹಲವು ಸಂದರ್ಭಗಳಲ್ಲಿ ಕಾನೂನು ಪ್ರಶ್ನೆಗಳು ಎದುರಾಗಿವೆ.
ಇದರ ನಡುವೆ ತಂಬಾಕು ಉದ್ಯಮವೂ ತನ್ನ ದಾರಿ ಹುಡುಕಿಕೊಂಡಿದೆ. ʻಟ್ವಿನ್ ಪ್ಯಾಕ್ʼ ವಿಧಾನ ಎನ್ನುವುದು ಅದಕ್ಕೆ ಒಂದು ಉದಾಹರಣೆ. ತಂಬಾಕು ಹೊಂದಿರುವ ಭಾಗವನ್ನು ಪ್ರತ್ಯೇಕವಾಗಿ ಹಾಗೂ ತಂಬಾಕು ರಹಿತ ಪಾನ್ ಮಸಾಲಾವನ್ನು ಮತ್ತೊಂದು ಪ್ಯಾಕೆಟ್ನಲ್ಲಿ ಮಾರಾಟ ಮಾಡಲಾಗುತ್ತದೆ. ಗ್ರಾಹಕ ಎರಡನ್ನೂ ಖರೀದಿಸಿ ಮಿಶ್ರಣ ಮಾಡಿಕೊಂಡು ಸೇವಿಸುತ್ತಾನೆ. ಕಾಗದದ ಮೇಲೆ ಎರಡೂ ಪ್ರತ್ಯೇಕ ಉತ್ಪನ್ನಗಳಾದರೂ, ಬಳಕೆಯ ಸಂದರ್ಭದಲ್ಲಿ ಅವು ಒಂದೇ ಆಗಿಬಿಡುತ್ತವೆ!
ಹೀಗಾಗಿ ತಂಬಾಕು ನಿಷೇಧ ಎನ್ನುವುದು ಕೇವಲ ʻಸಿಗರೇಟ್ ಮಾರಾಟ ನಿಲ್ಲಿಸಿʼ ಎಂದು ಹೇಳುವುದರಿಂದ ಮುಗಿಯುವ ವಿಷಯವಲ್ಲ. ಅದರ ಹಿಂದೆ ಸಂವಿಧಾನ, ನ್ಯಾಯಾಲಯದ ವ್ಯಾಖ್ಯಾನ, ತೆರಿಗೆ ಆದಾಯ, ಉದ್ಯೋಗ, ಅಕ್ರಮ ಮಾರುಕಟ್ಟೆ, ಕಳ್ಳಸಾಗಣೆ ಮತ್ತು ಸಾರ್ವಜನಿಕ ಆರೋಗ್ಯ ಇಲ್ಲವೂ ಸೇರಿಕೊಂಡಿವೆ.
ಅದಕ್ಕಾಗಿಯೇ ಭಾರತದಲ್ಲಿ ಇದುವರೆಗೆ ಸಂಪೂರ್ಣ ನಿಷೇಧಕ್ಕಿಂತ ಕಠಿಣ ನಿಯಂತ್ರಣದ ಮಾದರಿಯನ್ನೇ ಅನುಸರಿಸಲಾಗುತ್ತಿದೆ. ಆದರೆ ಪ್ರಶ್ನೆ ಮಾತ್ರ ಉಳಿದುಬಿಡುತ್ತದೆ. ಈ ನಿಯಂತ್ರಣಗಳು ನಿಜವಾಗಿಯೂ ತಂಬಾಕಿನ ಬಳಕೆಯನ್ನು ಕಡಿಮೆ ಮಾಡುತ್ತಿವೆಯೇ? ಇಲ್ಲವೇ ಕಾನೂನಿನ ಸಣ್ಣ ಸಣ್ಣ ಬಿರುಕುಗಳ ಮೂಲಕ ತಂಬಾಕು ಉದ್ಯಮ ತನ್ನ ದಾರಿಯನ್ನು ಕಂಡುಕೊಳ್ಳುತ್ತಿದೆಯೇ? ಇದೇ ಈ ಕಥೆಯ ಮುಂದಿನ ಕುತೂಹಲಕಾರಿ ಅಧ್ಯಾಯ.
….ಮುಂದುವರೆಯುತ್ತದೆ.