Monday, September 7, 2026
Join WhatsApp Group
HomeLocal Newsಗ್ರಾಮಸ್ಥರ ಸಂಕಷ್ಟಕ್ಕೆ ಸ್ಪಂದಿಸಿದ ಗುತ್ತಿಗೆದಾರ; ರಾಮನಕೊಪ್ಪ ರಸ್ತೆಯ ಮಣ್ಣು ತೆರವು

ಗ್ರಾಮಸ್ಥರ ಸಂಕಷ್ಟಕ್ಕೆ ಸ್ಪಂದಿಸಿದ ಗುತ್ತಿಗೆದಾರ; ರಾಮನಕೊಪ್ಪ ರಸ್ತೆಯ ಮಣ್ಣು ತೆರವು

ಯಲ್ಲಾಪುರ: ಮಳೆಗಾಲ ಆರಂಭವಾಗುತ್ತಿದ್ದಂತೆ ಗ್ರಾಮೀಣ ರಸ್ತೆಗಳ ದುಸ್ಥಿತಿ ಸಾಮಾನ್ಯ. ಆದರೆ, ತಾಲೂಕಿನ ರಾಮನಕೊಪ್ಪದ ರಸ್ತೆಯ ವಿಚಾರದಲ್ಲಿ ರಸ್ತೆಯನ್ನು ಕೆಸರು ಗದ್ದೆಂತಾಗಿಸಲು ಕಾರಣವಾಗಿದ್ದು ಕೇವಲ ಮಳೆಯಲ್ಲ. ಸತತವಾಗಿ ಸಂಚರಿಸಿದ ಟಿಂಬರ್‌ ಲಾರಿಗಳು ಹಾಗೂ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ಗಳ ಭಾರಿ ಓಡಾಟವೂ ರಸ್ತೆಯ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿತ್ತು. ಇದೀಗ ಇದೇ ರಸ್ತೆಯ ಸಮಸ್ಯೆ ಗಮನಿಸಿ, ಕಾಮಗಾರಿ ನಡೆಸಿದ್ದ ಗುತ್ತಿಗೆದಾರರೊಬ್ಬರು ಸ್ವಂತ ಖರ್ಚಿನಲ್ಲಿ ಪರಿಹಾರಕ್ಕೆ ಮುಂದಾಗಿದ್ದಾರೆ.

ಯಲ್ಲಾಪುರ–ಮುಂಡಗೋಡು ರಸ್ತೆಯ ಲಿಂಗ್ಯಾನಕೊಪ್ಪ ಶಾಲೆ ಸಮೀಪದಿಂದ ಮಾವಳ್ಳಿ ಸಂಪರ್ಕಿಸುವ ಮುಖ್ಯ ರಸ್ತೆಯಿಂದ ರಾಮನಕೊಪ್ಪಕ್ಕೆ ತೆರಳುವ ರಸ್ತೆಗೆ ಮಳೆಗಾಲಕ್ಕೂ ಮುನ್ನ 15ನೇ ಹಣಕಾಸು ಯೋಜನೆಯಡಿ ಮಣ್ಣು ಹಾಕಲಾಗಿತ್ತು. ಮಣ್ಣು ಹಾಕುವಾಗಲೂ ಅರಣ್ಯ ಇಲಾಖೆಯವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಅಗತ್ಯ ಗೊಚ್ಚು ಮಣ್ಣು ಲಭ್ಯವಾಗದೇ ಇತಿ-ಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿತ್ತು.

ಇದನ್ನೂ ಓದಿ…

ಕಾಮಗಾರಿ ಪೂರ್ಣಗೊಂಡ ಸಂದರ್ಭದಲ್ಲಿ ರಸ್ತೆ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಜುಲೈ ತಿಂಗಳಿನಿಂದ ಸತತ ಮಳೆ ಸುರಿಯುವುದರ ಜೊತೆಗೆ ಇದೇ ಮಾರ್ಗದಲ್ಲಿ ಅರಣ್ಯ ಇಲಾಖೆಯ ಟಿಂಬರ್‌ ಲಾರಿಗಳು ಹಾಗೂ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ಗಳು ಭಾರ ಹೊತ್ತು ನಿರಂತರವಾಗಿ ಸಂಚರಿಸಿದ್ದರಿಂದ ರಸ್ತೆ ಹದಗೆಟ್ಟಿತ್ತು.

ಇದರ ಪರಿಣಾಮ ಮಣ್ಣು ಕೆಸರಾಗಿ ಪರಿವರ್ತನೆಯಾಗಿ, ದ್ವಿಚಕ್ರ ವಾಹನ ಸವಾರರಿಗೆ ರಸ್ತೆ ಅಪಾಯಕಾರಿಯಾಗಿ ಪರಿಣಮಿಸಿತ್ತು. ಪ್ರತಿದಿನ ಒಂದಲ್ಲ ಒಂದು ಬೈಕ್ ಜಾರಿ ಬೀಳುತ್ತಿದ್ದರೆ, ಶಾಲೆಗೆ ತೆರಳುವ ಶಿಕ್ಷಕರು ಹಾಗೂ ಗ್ರಾಮಸ್ಥರು ಕೂಡ ಪರದಾಡುವಂತಾಗಿತ್ತು. ಈ ಕುರಿತು ಕೆನರಾ ನೆಕ್ಸ್ಟ್ ವರದಿ ಪ್ರಕಟಿಸಿ, ಮಳೆಗಾಲದಲ್ಲಿ ರಸ್ತೆಯ ಸ್ಥಿತಿ ಹಾಗೂ ಸಾರ್ವಜನಿಕರ ಸಂಕಷ್ಟವನ್ನು ಅನಾವರಣಗೊಳಿಸಿತ್ತು.

ಈ ಹಿನ್ನೆಲೆಯಲ್ಲಿ ರಾಮನಕೊಪ್ಪದವರೇ ಆದ ಗುತ್ತಿಗೆದಾರ ಕೇಶವ ಮರಾಠಾ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿದ್ದಾರೆ. ಹಿರಿಯ ಅಧಿಕಾರಿಗಳ ಅನುಮತಿ ಪಡೆದು, ತಾವು ರಸ್ತೆ ಕಾಮಗಾರಿಗಾಗಿ ಹಾಕಿದ್ದ ಮಣ್ಣನ್ನು ತಮ್ಮದೇ ಖರ್ಚಿನಲ್ಲಿ ಜೆಸಿಬಿ ಬಳಸಿ ಸಂಪೂರ್ಣವಾಗಿ ತೆರವುಗೊಳಿಸಿದ್ದಾರೆ.

ತಮ್ಮೂರಿನ ಅಭಿವೃದ್ಧಿ ಹಾಗೂ ಜನೋಪಯೋಗಿ ಕೆಲಸಗಳ ಉದ್ದೇಶದಿಂದ ಗುತ್ತಿಗೆದಾರರಾಗಿರುವ ಕೇಶವ ಮರಾಠಾ, ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆಯ ಸ್ಥಿತಿ ಹದಗೆಟ್ಟಿರುವುದನ್ನು ಕಂಡು ಸುಮ್ಮನೆ ಕುಳಿತುಕೊಳ್ಳದೆ, ʻರಸ್ತೆ ಸಮಸ್ಯೆಯಿಂದ ಜನರಿಗೆ ತೊಂದರೆಯಾಗಬಾರದುʼ ಎಂಬ ಉದ್ದೇಶದಿಂದ ಸ್ವಂತ ಖರ್ಚಿನಲ್ಲಿ ಮಣ್ಣು ತೆರವುಗೊಳಿಸುವ ಮೂಲಕ ಸ್ಪಂದಿಸಿದ್ದಾರೆ.

ರಸ್ತೆ ಹದಗೆಡಲು ಮಳೆ ಮಾತ್ರ ಕಾರಣವಲ್ಲದೆ, ಭಾರಿ ಟಿಂಬರ್‌ ಲಾರಿಗಳು ಮತ್ತು ಮರಳು ಸಾಗಿಸುವ ಟ್ರ್ಯಾಕ್ಟರ್‌ಗಳ ನಿರಂತರ ಸಂಚಾರವೂ ಕಾರಣವಾಗಿದೆ ಎಂಬುದು ಸ್ಥಳೀಯರ ಗಮನ ಸೆಳೆದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದ ಬಳಿಕವೂ ಭಾರಿ ವಾಹನಗಳ ಸಂಚಾರದ ಮೇಲೆ ನಿಯಂತ್ರಣ ಇರಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.

ಮಣ್ಣು ತೆರವು ಕಾರ್ಯದ ಸಂದರ್ಭದಲ್ಲಿ ಸ್ಥಳೀಯರಾದ ನಾಗರಾಜ ಭೋವಿ, ಚಂದ್ರಶೇಖರ ಭಟ್ಟ, ಆಕಾಶ್ ಮರಾಠಿ, ಪಾಂಡುರಂಗ ಮರಾಠಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share